ಹುಲಸೂರ: ‘ಸುಮಾರು ಆರೇಳು ವರ್ಷಗಳಿಂದ ಇಲ್ಲಿನ ಜಮಖಂಡಿ ಗ್ರಾಮ ಸನಿಹ ಕುಸಿದು ಬಿದ್ದಿರುವ ಮುಖ್ಯ ರಸ್ತೆಯ ಸೇತುವೆಯನ್ನು ಜೂನ್ 7ರೊಳಗೆ ನಿರ್ಮಿಸಿ ಪೂರ್ಣ ಗೊಳಿಸಬೇಕು’ ಎಂದು ಶಾಸಕ ಶರಣು ಸಲಗರ ಹೇಳಿದರು.
ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಪಿ. ನಾಗಪ್ಪ ಅವರೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.
‘ಆಂಧ್ರಪ್ರದೇಶದ ಹೈದ್ರಾಬಾದ್, ಮಹಾರಾಷ್ಟ್ರದ ಲಾತೂರ್ ಜಿಲ್ಲೆ ಮತ್ತು ಕರ್ನಾಟಕ್ಕೆ ಸಂಪರ್ಕಿಸುವ ಬಹುಮುಖ್ಯ ಸೇತುವೆ ಇದಾಗಿದೆ’ ಎಂದರು.
‘ಸೇತುವೆಯ ನಿರ್ಮಾಣ ಭಾಗವಾಗಿ ಈಗಾಗಲೇ ಪೈಪ್ಗಳು ಹಾಕಲಾಗಿದೆ. ಎರಡು ವಾರದೊಳಗೆ ಸೇತುವೆ ನಿರ್ಮಾಣಗೊಳ್ಳುತ್ತದೆ. ಮಹಾರಾಷ್ಟ್ರದ ಶಹಾಜನಿ ಔರಾದ್ ಮತ್ತು ಹುಲಸೂರ ಮಾರ್ಗ ಮಧ್ಯದ ಕರ್ನಾಟಕ ವ್ಯಾಪ್ತಿಯ ಮೂರು ಹೊಸ ಸೇತುವೆಗಳು ಸೇರಿದಂತೆ 5 ಕಿ.ಮೀ. ಡಾಂಬರ್ ರಸ್ತೆ ನಿರ್ಮಿಸಲು 11ನೇ ಯೋಜನೆಯಲ್ಲಿ ₹45 ಕೋಟಿ ಮಂಜೂಜೂರಾಗಿದೆ. ಐದಾರು ತಿಂಗಳೊಳಗಾಗಿ ಅದು ಪೂರ್ಣಗೊಳ್ಳುತ್ತದೆ’ ಎಂದು ಪಿ. ನಾಗಪ್ಪ ಮಾಹಿತಿ ನೀಡಿದರು.
ಜಿ.ಪಂ ಮಾಜಿ ಉಪಾಧ್ಯಕ್ಷೆ ಲತಾ ಹರಕೂಡೆ, ಎಂ.ಜಿ. ರಾಜೋಳೆ, ಪಿಡಿಒ ಭೀಮಶೆಪ್ಪ ದಂಡೀನ್, ಗ್ರಾ.ಪಂ ಮಾಜಿ ಅಧ್ಯಕ್ಷ ಚಂದ್ರಕಾಂತ್ ದೇಟ್ನೆ, ಬಿಜೆಪಿ ತಾಲ್ಲೂಕಾಧ್ಯಕ್ಷ ಅಶೋಕ್ ವಕಾರೆ, ಕಾಶಿನಾಥ ಪಾರಶಟ್ಟೆ, ಕಾಶಿನಾಥ ಕೌಟೆ, ಅರವಿಂದ್ ಹರಪಲ್ಲೆ ಇದ್ದರು.