ಔರಾದ್: ಪಟ್ಟಣದಲ್ಲಿ ಇದೇ 4ರಂದು ನಡೆಯಲಿರುವ ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆಯ ಭರದ ಸಿದ್ಧತೆ ನಡೆದಿದೆ.
ಪಟ್ಟಣದ ತಹಶೀಲ್ದಾರ್ ಕಚೇರಿ ಎದುರಿನ ಮೈದಾನದಲ್ಲಿ ಸಮಾವೇಶ ನಡೆಸಲು ತಯಾರಿ ನಡೆಸಲಾಗಿದ್ದು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ರಾಜಶೇಖರ ಪಾಟೀಲ, ರಹೀಂಖಾನ್, ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ, ಅರವಿಂದಕುಮಾರ ಅರಳಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ನ ಹಿರಿಯ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರತಿ ಊರಿನಿಂದ ವಿಶೇಷವಾಗಿ ಮಹಿಳೆಯರು ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು ಜನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲ ಬರ್ಗೆ, ಆನಂದ ಚವಾಣ್ ತಿಳಿಸಿದ್ದಾರೆ.
ಸಭೆ: ಪ್ರಜಾ ಧ್ವನಿಯಾತ್ರೆ ಸಿದ್ಧತೆ ಕುರಿತು ಪಕ್ಷದ ಪ್ರಮುಖರು ಗುರುವಾರ ಸಭೆ ನಡೆಸಿದರು. ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯನ್ನು ಜನರಿಗೆ ತಿಳಿಸುವುದು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜನರಿಗೆ ಆಗುವ ಉಪಯೋಗದ ಮಾಹಿತಿ ನೀಡುವುದು ಪ್ರಜಾ ಧ್ವನಿಯಾತ್ರೆಯ ಉದ್ದೇಶವಾಗಿದೆ. ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಬಿಪಿಎಲ್ ಕುಟುಂಬಕ್ಕೆ ಪ್ರತಿ ತಿಂಗಳು ₹ 2000 ನೀಡುವ ಯೋಜನೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೇ ಜಾರಿಗೆ ಬರಲಿದೆ. ಈ ಎಲ್ಲ ವಿಷಯ ಜನರಿಗೆ ತಿಳಿಸಿ ಸಮಾವೇಶಕ್ಕೆ ಕರೆದುಕೊಂಡು ಬರುವಂತೆ ಮುಖಂಡರು ತಿಳಿಸಿದರು.