ಕಮಲನಗರ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿ, ಭದ್ರ ಬುನಾದಿ ಒದಗಿಸಿದ್ದಾರೆ ಎಂದು ಶಾಲೆ ಮುಖ್ಯಶಿಕ್ಷಕಿ ಸಂಪೂರ್ಣ ಎಂ ಕರಿಮಣಿ ಸ್ಮರಿಸಿದರು.
ತಾಲ್ಲೂಕಿನ ಸಂಗಮ ಗ್ರಾಮದ ಡಾ. ಚನ್ನಬಸವ ಪಟ್ಟದ್ದೇವರು ಗುರುಕುಲ ಶಾಲೆಯಲ್ಲಿ ಮಂಗಳವಾರ ನಡೆದ ಸಂವಿಧಾನ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಂವಿಧಾನ ರಚನೆಯಿಂದ ಭಾರತೀಯರಲ್ಲಿ ಏಕತೆ, ಸಮಗ್ರತೆ ಮೂಡಿದೆ ಎಂದರು.
ಶಿಕ್ಷಕ ಮಹಾದೇವ ಕರಂಜೆ ಮಾತನಾಡಿ,‘ಸಂವಿಧಾನ ರಚಿಸಲು ಶ್ರಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಮಿತಿ ಸದಸ್ಯರನ್ನು ಸ್ಮರಿಸುವ ದಿನ ಇದಾಗಿದೆ. ಭಾರತೀಯ ಸಂವಿಧಾನ ರಚನೆ ಸಂದರ್ಭದಲ್ಲಿ ಸುಮಾರು 8 ಕ್ಕೂ ಹೆಚ್ಚು ದೇಶಗಳ ಸಂವಿಧಾನಗಳನ್ನು ಪರಾಮರ್ಶಿಸಿ ಅದರಲ್ಲಿನ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಚಂದನಾ ಕಿವಡೆ, ಸಾವಿತ್ರಿ ಸೂರ್ಯವಂಶಿ, ಸಂಜೀವಕುಮಾರ ಮೇಂಗಾ, ಪಾರ್ವತಿ, ಪುಷ್ಫಾ, ಶಿವಕುಮಾರ ಹಿರೇಮಠ ಮತ್ತು ಶಾಲೆ ಶಿಕ್ಷಕ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.
ದಾಕ್ಷಾಯಿಣಿ ಅಂಬಿಗ ಕಾರ್ಯಕ್ರಮವನ್ನು ನಿರುಪಿಸಿ ಕೊನೆಯಲ್ಲಿ ವಂದಿಸಿದರು.
ಗ್ರಾ.ಪಂ ಕಚೇರಿ: ತಾಲ್ಲೂಕಿನ ಡೋಣಗಾಂವ್(ಎಂ) ಗ್ರಾಪಂ ಕಚೇರಿಯಲ್ಲಿ ಸಂವಿಧಾನ ದಿನ ಆಚರಿಸಲಾಯಿತು.
ಪಿಡಿಒ ದತ್ತಾತ್ರಿ ಮಾತನಾಡಿ,‘ದೇಶದ ಪ್ರತಿಯೊಬ್ಬರಿಗೂ ಸಂವಿಧಾನದ ಅರಿವು ಅಗತ್ಯ’ ಎಂದು ಹೇಳಿದರು.
ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ದೇಶದ ಎಲ್ಲ ಬಗೆಯ ವ್ಯವಸ್ಥೆ ನಡೆಯುತ್ತಿರುವುದೇ ಸಂವಿಧಾನದ ಚೌಕಟ್ಟಿನಲ್ಲಿ ಎಂದು ತಿಳಿಸಿದರು.ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಇದ್ದರು.