ಬೀದರ್: ಸರ್ಕಾರ ಲಾಕ್ಡೌನ್ ಸಡಿಲಗೊಳಿಸಿದರೂ ಜಿಲ್ಲೆಯ ಜನ ಕೋವಿಡ್ ಸಂಪೂರ್ಣ ತೊಲಗುವವರೆಗೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ರಾಷ್ಟ್ರೀಯ ಬಸವ ದಳದ ಬೀದರ್ ದಕ್ಷಿಣ ಘಟಕದ ಉಸ್ತುವಾರಿ ಮಹಾಲಿಂಗ ಸ್ವಾಮಿ ಚಟ್ನಳ್ಳಿ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ 54 ದಿನಗಳ ನಂತರ ಲಾಕ್ಡೌನ್ನಲ್ಲಿ ದೊಡ್ಡ ಮಟ್ಟದ ಸಡಿಲಿಕೆ ನೀಡಲಾಗಿದೆ. ಸಾರ್ವಜನಿಕರು ಸುರಕ್ಷತಾ ನಿಯಮಗಳ ಪಾಲನೆಯೊಂದಿಗೆ ಮತ್ತೆ ಲಾಕ್ಡೌನ್ ಸನ್ನಿವೇಶ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಸುವುದು ಸೇರಿದಂತೆ ಸರ್ಕಾರದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಪಾಲಿಸಬೇಕು. ಕೋವಿಡ್ ನಿರ್ಮೂಲನೆಗೆ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದ್ದಾರೆ.
ಕೋವಿಡ್ ಸೋಂಕು ತಡೆಯುವಲ್ಲಿ ಮಾಸ್ಕ್ ಪಾತ್ರ ಬಹುಮುಖ್ಯವಾಗಿದೆ. ಹೀಗಾಗಿ ಮಾಸ್ಕ್ ಧರಿಸದೆ, ನಿರ್ಲಕ್ಷ್ಯ ತೋರುವವರಿಗೆ ದೊಡ್ಡ ಪ್ರಮಾಣದ ದಂಡ ವಿಧಿಸಬೇಕು. ಮಾಸ್ಕ್ ಹಾಗೂ ಲಸಿಕೆ ಜಾಗೃತಿಯನ್ನು ಮುಂದುವರಿಸಬೇಕು ಎಂದು ಹೇಳಿದ್ದಾರೆ.