ಬೀದರ್: ಇಲ್ಲಿಯ ಶಹಾಪುರ ಗೇಟ್ ಸಮೀಪದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಕೋವಿಡ್ ಲಸಿಕಾಕರಣ ನಡೆಯಿತು.
ಲಸಿಕಾಕರಣಕ್ಕೆ ಚಾಲನೆ ನೀಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್. ಆಂಜನೇಯ ಅವರು ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದರು. 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಲಸಿಕೆ ತೆಗೆದುಕೊಂಡರು.
ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕಾಲೇಜಿನಿಂದ ನಗರದ ಅಬ್ದುಲ್ ಫೈಜ್, ಮಂಗಲಪೇಟ್ ಮಾರ್ಗವಾಗಿ ಚೌಬಾರಾ ವರೆಗೆ ಕೋವಿಡ್ ಹಾಗೂ ಸ್ವಚ್ಛತೆ ಜಾಗೃತಿ ರ್ಯಾಲಿ ನಡೆಸಿದರು.
ಕೋವಿಡ್ನಿಂದ ಸುರಕ್ಷತೆಗೆ ಲಸಿಕೆ ಕಡ್ಡಾಯವಾಗಿ ಪಡೆಯಿರಿ ಎನ್ನುವುದು ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗಿದರು. ದೈಹಿಕ ಶಿಕ್ಷಕರಾದ ಅಬ್ದುಲ್ ಖಾದರ್ ಹಾಗೂ ಸದ್ದಾಂ ಹುಸೇನ್ ಅವರ ಮಾರ್ಗದರ್ಶನದಲ್ಲಿ ನಡೆದ ರ್ಯಾಲಿಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.