ಬೀದರ್: ತಾಲ್ಲೂಕಿನ ಕೊಳಾರ(ಕೆ) ಗ್ರಾಮದಲ್ಲಿ ಮಂಗಳವಾರ 20 ಹಂದಿಗಳು ಮೃತಪಟ್ಟಿವೆ. ಇದಕ್ಕೆ ಕಾರಣ ತಿಳಿದು ಬಂದಿಲ್ಲ.
ಹಂದಿ ಮಾಲೀಕರು ಭಯದಿಂದ ಸತ್ತ ಹಂದಿಗಳನ್ನು ಊರ ಹೊರಗಡೆ ಎಸೆದು ಬಂದಿದ್ದಾರೆ. ಮಾರಕ ರೋಗದಿಂದಾಗಿಯೇ ಹಂದಿಗಳು ಮೃತಪಟ್ಟಿರಬಹುದು ಎಂದು ಗ್ರಾಮಸ್ಥರು ಆಡಿಕೊಳ್ಳುತ್ತಿದ್ದಾರೆ. ಸೋಮವಾರ 8–10 ಹಂದಿಗಳು ಮೃತಪಟ್ಟಿದ್ದವು. ಮಂಗಳವಾರ ಮತ್ತೆ 10 ಹಂದಿಗಳು ಸಾವಿಗೀಡಾಗಿರುವುದು ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.
ಹಿರಿಯರು ಗ್ರಾಮದಲ್ಲಿ ರಾತ್ರಿ ಡಂಗೂರ ಬಾರಿಸಿ ಮುನ್ನೆಚ್ಚರಿಕೆ ವಹಿಸುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ. ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.
‘ಕೊಳಾರ ಗ್ರಾಮಕ್ಕೆ ವೈದ್ಯರ ತಂಡ ಕಳಿಸಿ ಹಂದಿಗಳ ರಕ್ತ ಮಾದರಿ ಪಡೆಯಲಾಗುವುದು. ಹಂದಿ ಮಾಲೀಕರೊಂದಿಗೆ ಸಮಾಲೋಚನೆ ನಡೆಸಲಾಗವುದು’ ಎಂದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಗೌತಮ ಅರಳಿ ತಿಳಿಸಿದ್ದಾರೆ.