ಬೀದರ್: ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್ಎಸ್ಎಸ್ಕೆ) ಉಪಾಧ್ಯಕ್ಷ ಕಾಶಪ್ಪ ಧನ್ನೂರ (78) ಗುರುವಾರ ಮೃತಪಟ್ಟಿದ್ದಾರೆ.
ಕೊರೊನಾ ಸೋಂಕಿನ ಕಾರಣ ಮಹಾರಾಷ್ಟ್ರದ ಸೋಲಾಪುರದ ಯಶೋಧರಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಜಿಲ್ಲೆಯ ಲಿಂಗಾಯತ ಸಮಾಜದ ಹಿರಿಯ ಮುಖಂಡರಲ್ಲಿ ಒಬ್ಬರಾಗಿದ್ದ ಭಾಲ್ಕಿ ತಾಲ್ಲೂಕಿನ ಧನ್ನೂರ ಗ್ರಾಮದ ಅವರು ಬಸವ ಭಕ್ತರಾಗಿದ್ದರು.
ಹಿರಿಯ ಉದ್ಯಮಿ, ಬೀದರ್ನ ಗಾಂಧಿಗಂಜ್ನ ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿದ್ದರು. ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಅವರಿಗೆ ಪತ್ನಿ ಸುಶೀಲಾಬಾಯಿ, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಉದ್ಯಮಿ ವಿವೇಕಾನಂದ ಧನ್ನೂರ ಸೇರಿ ಇಬ್ಬರು ಪುತ್ರರು, ಪುತ್ರಿ ಡಾ. ಜ್ಯೋತಿ ಇದ್ದಾರೆ.