ಬೀದರ್: ಮೇ 3 ರಂದು ನಗರದಲ್ಲಿ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಬಸವ ಜಯಂತಿ ಉತ್ಸವ ಸಮಿತಿ ನಿರ್ಣಯಿಸಿದೆ.
ಸಮಿತಿಯು ಇಲ್ಲಿಯ ಉದಗಿರ ರಸ್ತೆಯಲ್ಲಿನ ವಾಲಿ ಕಾಂಪ್ಲೆಕ್ಸ್ನಲ್ಲಿ ಇರುವ ಸಮಿತಿಯ ಕಚೇರಿಯಲ್ಲಿ ನಡೆಸಿದ ವಿವಿಧ ಸಮಾಜಗಳ ಪ್ರಮುಖರ ಸಭೆಯಲ್ಲಿ ಎಲ್ಲ ಸಮಾಜಗಳ ಸಹಯೋಗದೊಂದಿಗೆ ಬೈಕ್ ರ್ಯಾಲಿ, ವೇದಿಕೆ ಸಮಾರಂಭ, ವಚನ ಸಂಗೀತ, ಮೆರವಣಿಗೆ ಮೊದಲಾದ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಯಿತು.
ನಗರದ ಎಲ್ಲ ವೃತ್ತಗಳಿಗೆ ವಿದ್ಯುತ್ ದೀಪ, ಷಟ್ಸ್ಥಲ ದ್ವಜಗಳ ಅಲಂಕಾರ, ಪ್ರಮುಖ ಮಾರ್ಗಗಳಲ್ಲಿ ಸ್ವಾಗತ ಕಮಾನುಗಳನ್ನು ಅಳವಡಿಸಲು ನಿರ್ಧರಿಸಲಾಯಿತು.
ಸಮಿತಿಯ ಹಿರಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಬಸವಣ್ಣನವರು ನವ ಸಮಾಜದ ನಿರ್ಮಾಪಕ, ದಾರ್ಶನಿಕ, ವಿಶ್ವಮಾನ್ಯರಾಗಿದ್ದಾರೆ. ಅವರು ಯಾವುದೇ ಜಾತಿಗೆ ಸೀಮಿತರಲ್ಲ. ಕಾರಣ ಅವರ ಜಯಂತಿ ಇಡೀ ಮನುಕುಲದ ಉತ್ಸವವಾಗಬೇಕು ಎಂದು ನುಡಿದರು.
ಜಿಲ್ಲಾ ಸಂಗೊಳ್ಳಿ ರಾಯಣ್ಣ ಗೊಂಡ ಸಂಘದ ಅಧ್ಯಕ್ಷ ಬಾಬುರಾವ್ ಮಲ್ಕಾಪೂರೆ ಮಾತನಾಡಿ, ಬಸವಣ್ಣ ಸಮ ಸಮಾಜ ನಿರ್ಮಿಸಿದ್ದರು. ಅವರ ಜಯಂತಿ ಕಾರ್ಯಕ್ರಮದಲ್ಲಿ ಎಲ್ಲ ಸಮಾಜದವರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಉತ್ಸವ ಸಮಿತಿಯ ಗೌರವಾಧ್ಯಕ್ಷ ಚಂದ್ರಶೇಖರ ಪಾಟೀಲ ಗಾದಗಿ ಮಾತನಾಡಿ, ಎಲ್ಲ ಸಮಾಜದವರು ಜತೆಗೂಡಿ ಬಸವ ಜಯಂತಿ ಆಚರಿಸುವುದರಿಂದ ಸಮಾಜದಲ್ಲಿ ಸೌಹಾರ್ದದ ವಾತಾವರಣ ನೆಲೆಗೊಳ್ಳುತ್ತದೆ ಎಂದರು.
ಗೌರವ ಸಲಹೆಗಾರ ಶಿವಶರಣಪ್ಪ ವಾಲಿ ಮಾತನಾಡಿ, ಆಯಾ ಸಮಾಜಗಳ ಪ್ರತಿನಿಧಿಗಳು ತಮ್ಮ ಸಮಾಜದ ಶರಣರ ಭಾವಚಿತ್ರಗಳೊಂದಿಗೆ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಮಾತನಾಡಿ, ಎಲ್ಲ ಸಮಾಜದವರು ಸೇರಿ ವೈಭವದ ಬಸವ ಜಯಂತಿ ಆಚರಿಸಲು ನಿರ್ಧರಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು.
ವಿವಿಧ ಸಮಾಜಗಳ ಮುಖಂಡರಾದ ಸೋಮಶೇಖರ ಅಮಲಾಪೂರ, ದತ್ತಾತ್ರೇಯ, ಶಿವರಾಜ ಮನ್ನಳ್ಳಿ, ರಾಮಚಂದ್ರ, ನಿತಿನ್ ನವಲಕಿಲೆ, ಸಂಜುಕುಮಾರ, ಸುನೀಲ್ ಭಾವಿಕಟ್ಟಿ, ಸಿದ್ಧು ಫುಲಾರೆ, ಸುರೇಶ ಟಿಳ್ಳೆಕರ್, ದಿಗಂಬರ ಮಡಿವಾಳ, ರವೀಂದ್ರ, ಶಾಮರಾವ್ ಮೋರ್ಗಿಕರ್, ಗುಂಡಪ್ಪ ಕುಂಬಾರ, ರಾಜಕುಮಾರ ಕಮಠಾಣೆ ಸಲಹೆ, ಸೂಚನೆಗಳನ್ನು ನೀಡಿದರು.
ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪೂರ, ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ಕೋಶಾಧ್ಯಕ್ಷ ಡಾ. ರಜನೀಶ್ ವಾಲಿ, ಗೌರವ ಸಲಹೆಗಾರರಾದ ವೈಜಿನಾಥ ಕಮಠಾಣೆ, ಶರಣಪ್ಪ ಮಿಠಾರೆ, ಮಹಿಳಾ ಸಮಿತಿ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ವೇದಿಕೆ ಸಮಿತಿ ಅಧ್ಯಕ್ಷ ಸುರೇಶ ಚನಶೆಟ್ಟಿ, ಮೆರವಣಿಗೆ ಸಮಿತಿ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಪ್ರಚಾರ ಸಮಿತಿ ಅಧ್ಯಕ್ಷ ಅಶೋಕಕುಮಾರ ಕರಂಜಿ, ಕಾರ್ಯದರ್ಶಿ ಯೋಗೇಂದ್ರ ಯದಲಾಪೂರೆ, ಬೈಕ್ ರ್ಯಾಲಿ ಸಮಿತಿ ಅಧ್ಯಕ್ಷ ಅರುಣಕುಮಾರ ಹೋತಪೇಟ, ಪ್ರಮುಖರಾದ ಬಸವರಾಜ ಭತಮುರ್ಗೆ, ಪ್ರಕಾಶ ಸಾವಳಗಿ, ರವಿ ಪಾಪಡೆ, ನಂದಕುಮಾರ ಪಾಟೀಲ ಇದ್ದರು. ಸುರೇಶ ಸ್ವಾಮಿ ನಿರೂಪಿಸಿದರು. ಬಸವರಾಜ ಬಿರಾದಾರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.