ಬೀದರ್: 1995 ರಿಂದ ಈಚೆಗೆ ಪ್ರಾರಂಭಿಸಿದ ಎಲ್ಲ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಧರಣಿ ಸತ್ಯಾಗ್ರಹ ನಡೆಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಭರಶೆಟ್ಟಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರಿಗೆ ಸಲ್ಲಿಸಿದರು.
ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಒದಗಿಸುವ ಎಲ್ಲ ಸೌಲಭ್ಯಗಳನ್ನು ಖಾಸಗಿ ಶಾಲಾ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು. ಸರ್ಕಾರದಿಂದ ಅನುಮತಿ ಪಡೆದು 1 ರಿಂದ 5 ರ ವರೆಗೆ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳಿಗೆ 6 ರಿಂದ 8ನೇ ತರಗತಿ ವರೆಗೆ ಅನುಮತಿ ಕೊಡಬೇಕು. ಕೊರೊನಾದಿಂದ 6 ತಿಂಗಳಿಂದ ಸಂಬಳ ಇಲ್ಲದೆ ಕಷ್ಟದಲ್ಲಿರುವ ಶಿಕ್ಷಕರು ಹಾಗೂ ಸಿಬ್ಬಂದಿಗೆ ರೂ. 25 ಸಾವಿರ ಧನಸಹಾಯ ಒದಗಿಸಬೇಕು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಸಂವಿಧಾನದ ಕಲಂ 371 ಅಡಿ ಸಹಾಯಧನ ಕಲ್ಪಿಸಲು ಕಾರ್ಯನೀತಿ ರೂಪಿಸಬೇಕು. 2019-20ನೇ ಸಾಲಿನ ಆರ್ಟಿಇ ಅನುದಾನ ಬಿಡುಗಡೆ ಮಾಡಬೇಕು. 10 ವರ್ಷಗಳಿಂದ ನಡೆಯುತ್ತಿರುವ ಶಾಲೆಗಳಿಗೆ ಶಾಶ್ವತ ಮಾನ್ಯತೆ ಕೊಡಬೇಕು. ಸಾಲದ ಮೇಲೆ ಖರೀದಿಸಿದ ಶಾಲಾ ವಾಹನಗಳ ಸಾಲ ಮರುಪಾವತಿಯನ್ನು ಶಾಲೆ ಪ್ರಾರಂಭವಾಗುವವರೆಗೆ ಮುಂದೂಡಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ, ಉಪಾಧ್ಯಕ್ಷರಾದ ಸಂದೀಪ ಶೆಟಕಾರ್, ಬಾಬುರಾವ್ ಗೊಂಡ, ಕಾರ್ಯದರ್ಶಿ ಗುರುನಾಥ ರೆಡ್ಡಿ ಚಿಂತಾಕಿ, ಖಜಾಂಚಿ ರಾಜೇಂದ್ರ ಮಣಗಿರೆ, ಸುರೇಶ ಪಾಟೀಲ, ಬಸವರಾಜ ಶೆಟಕಾರ್, ಸಲೀಂ ಪಾಶಾ, ಶಾಮಣ್ಣ ಬಾವಗಿ, ಬಾಬುರಾವ್ ಗೊಂಡ ಮೊದಲಾದವರು ಭಾಗವಹಿಸಿದ್ದರು.