ಬೀದರ್: ಕಣ್ಣು ಕಾಣದಿದ್ದರೂ, ದೃಢ ಸಂಕಲ್ಪದಿಂದ ಸಾಧನೆ ಮಾಡಿ ತೋರಿಸಿದ ದಿಲೀಪ್ ಕಾಡವಾದ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಸಂಗೀತ ಕಲಾವಿದ ಶಿವಕುಮಾರ ಪಾಂಚಾಳ ನುಡಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕವು ಇಲ್ಲಿಯ ಕುಂಬಾರವಾಡದ ದಿಲೀಪ್ ಕಾಡವಾದ ಅವರ ಮನೆಯಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಕಾಡವಾದ ಗ್ರಾಮದ ದಿಲೀಪ್, ಬಹುಮುಖ ಪ್ರತಿಭೆಯಾಗಿದ್ದಾರೆ. ಗಾಯನ ಜತೆಗೆ ಹಾಡುಗಳಿಗೆ ನಿರ್ದೇಶನವನ್ನೂ ಮಾಡುತ್ತಾರೆ. ಕಂಪ್ಯೂಟರ್ನಲ್ಲಿ ಅವರು ಮಾಡುವ ಕಂಪೊಸಿಂಗ್, ಎಡಿಟಿಂಗ್ ಬೆರಗುಗೊಳಿಸುವಂಥದ್ದು ಎಂದು ಹೇಳಿದರು. ಛಲವಿದ್ದರೆ ಸಾಧನೆಗೆ ಯಾವುದೂ ಅಡ್ಡಿಯಾಗಲಾರದು ಎನ್ನುವುದಕ್ಕೆ ನಿದರ್ಶನವಾಗಿದ್ದಾರೆ ಎಂದು ತಿಳಿಸಿದರು.
ದಿಲೀಪ್ ಕಾಡವಾದ ದಂಪತಿಯನ್ನು ಸನ್ಮಾನಿಸಲಾಯಿತು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಆಶಯ ನುಡಿ ಆಡಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಅಧ್ಯಕ್ಷತೆ ವಹಿಸಿದ್ದರು.
ಕಲಾವಿದರಾದ ಸುನೀಲ್ ಕಡ್ಡೆ, ರಮೇಶ ಕೊಳಾರ, ರಾಘವೇಂದ್ರ ಮುತ್ತಂಗಿ, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಪರಮೇಶ್ವರ ಬಿರಾದಾರ, ಸುಬ್ಬಣ್ಣ ಕರಕನಳ್ಳಿ, ಪ್ರಭು ಮಾಲೆ ಇದ್ದರು.
ಸಿದ್ಧಾರೂಢ ಭಾಲ್ಕೆ ಸ್ವಾಗತಿಸಿದರು. ಶಿವಕುಮಾರ ಚನಶೆಟ್ಟಿ ನಿರೂಪಿಸಿದರು. ಅಶೋಕ ದಿಡಗೆ ವಂದಿಸಿದರು.