ಬೀದರ್: ಯೋಗದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಗುರುನಾನಕ್ ದೇವ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಕರ್ನಲ್ ಡಾ. ಬಿ.ಎಸ್ ಧಾಲಿವಾಲ್ ಹೇಳಿದರು.
ನಗರದ ಗುರುನಾನಕ್ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗವು ಜೀವನದ ದೈನಂದಿನ ಭಾಗವಾಗಬೇಕು. ಪ್ರತಿದಿನ ನಿರ್ವಹಿಸುವ ಇತರೆಲ್ಲ ಕಾರ್ಯಗಳಂತೆ ಯೋಗವನ್ನೂ ನಿಯಮಿತವಾಗಿ ಮಾಡಬೇಕು ಎಂದು ತಿಳಿಸಿದರು.
ಯೋಗಾಭ್ಯಾಸದ ಜತೆಗೆ ಆಹಾರದ ಬಗ್ಗೆಯೂ ಕಾಳಜಿ ವಹಿಸಬೇಕು. ಹಿತ ಮಿತವಾದ ಭೋಜನವು ಆರೋಗ್ಯ ರಕ್ಷಣೆಗೆ ನೆರವಾಗಬಲ್ಲದು ಎಂದರು.
ಪ್ರಾಚಾರ್ಯ ಡಾ.ರವೀಂದ್ರ ಎಕಲಾರಕರ್ ಮಾತನಾಡಿ, ಯೋಗಾಭ್ಯಾಸವನ್ನು ನಿಯಮಿತವಾಗಿ ಮಾಡಬೇಕು ಎಂದು ಹೇಳಿದರು.
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಯೋಗ ಜನಪ್ರಿಯವಾಗುತ್ತಿದೆ. ಯೋಗವು ಭಾರತ ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ ಎಂದರು.
ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟ ಕಾಲೇಜಿನ ಪಿಆರ್ಒ ರಾಜಶೇಖರ ಗಾಯತೊಂಡ, ಗಂಭೀರ ಸ್ವರೂಪದ ಕಾಯಿಲೆಗಳೂ ನಿಯಮಿತ ಯೋಗಾಭ್ಯಾಸದಿಂದ ಗುಣಮುಖವಾಗಬಲ್ಲವು. ರಕ್ತದೊತ್ತಡ, ಸಕ್ಕರೆ ಕಾಯಿಲೆ ಮೊದಲಾದವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದು ಹೇಳಿದರು.
ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬ್ಬಂದಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.