ಬೀದರ್: ‘ವೈದ್ಯರು ವೃತ್ತಿ ಪ್ರಾವೀಣ್ಯದ ಜತೆಗೆ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ ಪಾಟೀಲ ಚಾಕೂರ ಸಲಹೆ ಮಾಡಿದರು.
ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ನಗರದ ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಕ್ಷಣ ಎಂದರೆ ಕೇವಲ ಜ್ಞಾನ ಅಲ್ಲ. ಇತರರಿಗೆ ಮಾನವೀಯತೆ, ಸಹಕಾರ, ಪ್ರೀತಿ, ವಾತ್ಸಲ್ಯ ತೋರುವುದೂ ಆಗಿದೆ’ ಎಂದು ತಿಳಿಸಿದರು.
‘ವೈದ್ಯರನ್ನು ದೇವರಿಗೆ ಸಮಾನವಾಗಿ ಕಾಣಲಾಗುತ್ತಿದೆ. ವೈದ್ಯರು ಅದರಂತೆ ನಡೆದುಕೊಳ್ಳಲು ಪ್ರಯತ್ನಿಸಬೇಕು’ ಎಂದು ಕಿವಿಮಾತು ಹೇಳಿದರು.
ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವವಂತ ಖೂಬಾ ಮಾತನಾಡಿ, ‘ವೈದ್ಯರು ಹಣದ ಹಿಂದೆ ಬೀಳದೆ ಜನಸೇವೆ ಮಾಡಬೇಕು. ವೈದ್ಯೋ ನಾರಾಯಣ ಹರಿ ಎನ್ನುವ ಮಾತಿಗೆ ಬೆಲೆ ತಂದುಕೊಡಬೇಕು’ ಎಂದು ಹೇಳಿದರು.
ವೈದ್ಯರು ರೋಗಿಗಳ ಸೇವೆಯಲ್ಲಿ ಶಾಂತಿ, ಸಮಾಧಾನ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಎ.ಆರ್.ವಿ. ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಿದಂಬರ ಶಿಕ್ಷಣ ಸಂಶ್ಥೆಯ ಕಾರ್ಯದರ್ಶಿಗಳಾದ ಚನ್ನಬಸಪ್ಪ ಹಾಲಹಳ್ಳಿ, ಬಸವರಾಜ ಜಾಬಶೆಟ್ಟಿ, ಪ್ರಭುಶೆಟ್ಟಿ ಮುದ್ದಾ, ಡಾ. ವಿ.ಎಸ್. ಪಾಟೀಲ, ಬಿ.ಜಿ. ಶೆಟಕಾರ, ಡಾ. ಚಂಧ್ರಕಾಂತ ಹಳ್ಳ, ಡಾ. ಬ್ರಹ್ಮಾನಂದ ಸ್ವಾಮಿ ಇದ್ದರು.