ಬೀದರ್: ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ನೂತನ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಅವರು ಬೆಂಗಳೂರಿನ ನಿಗಮದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಕಲಬುರ್ಗಿ ಸಂಸದ ಡಾ. ಉಮೇಶ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ರಘುನಾಥರಾವ್ ಮಲ್ಕಾಪುರೆ, ಎಂಎಸ್ಐಎಲ್ ನಿರ್ದೇಶಕ ಬಾಬುವಾಲಿ ಮೊದಲಾದವರು ಹೂಗುಚ್ಛ ನೀಡಿ ಶುಭ ಕೋರಿದರು.
ರಾಜ್ಯ ಮಹಿಳಾ ಸಹಕಾರ ಮಹಾ ಮಂಡಳದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಕಾಶೀನಾಥ ಬೆಲ್ದಾಳೆ, ಡಾ.ನೀತಾ ಎಸ್. ಬೆಲ್ದಾಳೆ ಇದ್ದರು.
ನಾಳೆ ಬೀದರ್ಗೆ ಬೆಲ್ದಾಳೆ:ನಿಗಮದ ಅಧ್ಯಕ್ಷರಾದ ನಂತರ ಡಾ. ಬೆಲ್ದಾಳೆ ಮೊದಲ ಬಾರಿಗೆ ಸೋಮವಾರ (ನ.30) ಬೀದರ್ಗೆ ಬರಲಿದ್ದಾರೆ.
ಬೆಂಗಳೂರಿನಿಂದ ಹೈದರಾಬಾದ್ಗೆ ವಿಮಾನ ಹಾಗೂ ಅಲ್ಲಿಂದ ರಸ್ತೆ ಮೂಲಕ ಬೀದರ್ಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 10.30ಕ್ಕೆ ಬೀದರ್ ತಾಲ್ಲೂಕಿನ ಭಂಗೂರು ಕ್ರಾಸ್ ಬಳಿ ಬಿಜೆಪಿ ಕಾರ್ಯಕರ್ತರು ಅವರನ್ನು ಸ್ವಾಗತಿಸಿ ಬರಮಾಡಿಕೊಳ್ಳಲಿದ್ದಾರೆ.
ಅಲ್ಲಿಂದ ಅವರು ಮನ್ನಾಎಖ್ಖೆಳ್ಳಿಗೆ ಭೇಟಿ ನೀಡುವರು. ಬಳಿಕ ಚಾಂಗಲೇರಾದ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡಯುವರು ಎಂದು ಬಿಜೆಪಿ ಬೀದರ್ ದಕ್ಷಿಣ ಮಂಡಲ ಅಧ್ಯಕ್ಷ ರಾಜರೆಡ್ಡಿ ಶಹಾಬಾದ್ ತಿಳಿಸಿದ್ದಾರೆ.