ನವದೆಹಲಿ: ಭಾರತ ಫುಟ್ಬಾಲ್ ತಂಡದ ಮುಖ್ಯ ಕೋಚ್ ಸ್ಟೀಫನ್ ಕಾನ್ಸ್ಟೆಂಟೈನ್ ಅವರು ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಗುರುವಾರ 30 ಆಟಗಾರರ ತಂಡವನ್ನು ಪ್ರಕಟಿಸಿದ್ದಾರೆ.
ಜೂನ್ 1ರಿಂದ ಮುಂಬೈನಲ್ಲಿ ನಡೆಯುವ ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಗೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ.
ಮೇ 16ರಿಂದ ಮುಂಬೈನಲ್ಲಿ ಶಿಬಿರ ನಡೆಯಲಿದೆ. ಸುನಿಲ್ ಚೆಟ್ರಿ, ಗುರುಪ್ರೀತ್ ಸಿಂಗ್ ಸಂಧು ಸೇರಿದಂತೆ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಪರ ಆಡುವ ಕೆಲ ಆಟಗಾರರು ಈ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರು ಮೇ 18ರಂದು ಶಿಬಿರಕ್ಕೆ ಹಾಜರಾಗಲಿದ್ದಾರೆ.
ಮೇ 16 ರಂದು ಬಾಂಗ್ಲಾದೇಶದ ಬಂಗಬಂಧು ಕ್ರೀಡಾಂಗಣದಲ್ಲಿ ಜರುಗುವ ಎಎಫ್ಸಿ ಕಪ್ ಪಂದ್ಯದಲ್ಲಿ ಬಿಎಫ್ಸಿ ತಂಡ ಅಬಹಾನಿ ಢಾಕಾ ವಿರುದ್ಧ ಆಡಲಿದೆ. ಈ ಕಾರಣದಿಂದಲೇ ಬಿಎಫ್ಸಿ ಪರ ಆಡುವ ಆಟಗಾರರಿಗೆ ತಡವಾಗಿ ಶಿಬಿರ ಸೇರಿಕೊಳ್ಳಲು ಅವಕಾಶ ನೀಡಲಾಗಿದೆ.
ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ ಭಾರತ ತಂಡವು ನ್ಯೂಜಿಲೆಂಡ್, ಕೀನ್ಯಾ ಮತ್ತು ಚೀನಾ ತೈಪೆ ತಂಡಗಳ ವಿರುದ್ಧ ಸೆಣಸಲಿದೆ.
‘2019ರಲ್ಲಿ ಎಎಫ್ಸಿ ಏಷ್ಯಾ ಕಪ್ ನಡೆಯಲಿದೆ. ಅದಕ್ಕೂ ಮುನ್ನ ನಾವು ಕೆಲ ಟೂರ್ನಿಗಳಲ್ಲಿ ಆಡಬೇಕಿದೆ. ಇವುಗಳಲ್ಲಿ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ತಂಡವನ್ನು ಬಲಪಡಿಸುವ ಉದ್ದೇಶದಿಂದ ಶಿಬಿರ ಹಮ್ಮಿಕೊಂಡಿದ್ದೇವೆ’ ಎಂದು ಕೋಚ್ ಕಾನ್ಸ್ಟೆಂಟೈನ್ ತಿಳಿಸಿದ್ದಾರೆ.
‘ನ್ಯೂಜಿಲೆಂಡ್, ಕೀನ್ಯಾ ಮತ್ತು ಚೀನಾ ತೈಪೆ ತಂಡಗಳು ಬಲಿಷ್ಠವಾಗಿವೆ. ಆ ತಂಡಗಳನ್ನು ಮಣಿಸುವುದು ಅಷ್ಟು ಸುಲಭವಲ್ಲ. ಇದಕ್ಕಾಗಿ ನಾವು ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ತರಬೇತಿ ವೇಳೆ ಆಟಗಾರರಿಗೆ ವಿನೂತನ ಕೌಶಲಗಳನ್ನು ಹೇಳಿಕೊಡಲಾಗುತ್ತದೆ’ ಎಂದು ತಿಳಿಸಿದ್ದಾರೆ.
ತಂಡ ಇಂತಿದೆ: ಗೋಲ್ ಕೀಪರ್ಸ್: ಗುರುಪ್ರೀತ್ ಸಿಂಗ್ ಸಂಧು, ವಿಶಾಲ್ ಕೈತ್, ಅಮರಿಂದರ್ ಸಿಂಗ್ ಮತ್ತು ಸಂಜೀವನ್ ಘೋಷ್.
ಡಿಫೆಂಡರ್ಸ್: ಲಾಲ್ರು ಅತ್ತಾರ, ದೇವಿಂದರ್ ಸಿಂಗ್, ಪ್ರೀತಮ್ ಕೋಟಾಲ್, ಅನಾಸ್ ಎಡತೋಡಿಕಾ, ಸಂದೇಶ್ ಜಿಂಗಾನ್, ಸಲಾಮ್ ರಂಜನ್ ಸಿಂಗ್, ಜೆರಿ ಲಾಲ್ರಿನ್ಜುವಾಲಾ, ನಾರಾಯಣ ದಾಸ್ ಮತ್ತು ಸುಭಾಶಿಶ್ ಬೋಸ್.
ಮಿಡ್ಫೀಲ್ಡರ್ಸ್: ಉದಾಂತ ಸಿಂಗ್, ಲಾಲ್ತುಮಾವಿಯಾ ರಾಲ್ಟೆ, ಸಿಮೆನ್ಲೆನ್ ಡೌಂಗಲ್, ಧನಪಾಲ್ ಗಣೇಶ್, ಸೌವಿಕ್ ಚಕ್ರವರ್ತಿ, ಮಹಮ್ಮದ್ ರಫೀಕ್, ರೌಲಿನ್ ಬೊರ್ಗೆಸ್, ಪ್ರಣಯ್ ಹಲ್ದಾರ್, ಅನಿರುದ್ಧ್ ಥಾಪಾ, ವಿಕಾಸ್ ಜೈರು ಮತ್ತು ಹಾಲಿಚರಣ್ ನರ್ಜರಿ.
ಫಾರ್ವರ್ಡ್ಸ್: ಸುನಿಲ್ ಚೆಟ್ರಿ, ಬಲವಂತ್ ಸಿಂಗ್, ಜೆಜೆ ಲಾಲ್ಪೆಕ್ಲುವಾ, ಮನ್ವೀರ್ ಸಿಂಗ್, ಅಲೆನ್ ಡಿಯೊರೆ ಮತ್ತು ಆಶಿಕ್ ಕುರುನಿಯನ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.