ಭಾಲ್ಕಿ (ಬೀದರ್ ಜಿಲ್ಲೆ): ‘ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿನ ಅಪೌಷ್ಟಿಕತೆ ನೀಗಿಸಲು ರಾಜ್ಯ ಸರ್ಕಾರ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುತ್ತಿರುವುದು ಅಸಮಂಜಸ’ ಎಂದು ಇಲ್ಲಿನ ಹಿರೇಮಠದ ಹಿರಿಯ ಸ್ವಾಮೀಜಿ ಡಾ.ಬಸವಲಿಂಗ ಪಟ್ಟದ್ದೇವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಆಹಾರದಲ್ಲಿ ಭೇದ-ಭಾವ ಉಂಟು ಮಾಡುವುದು ಸರಿಯಲ್ಲ. ಹಣ್ಣು, ಮೊಳಕೆಕಾಳು, ಬೇಳೆಕಾಳು ಸೇರಿ ಅನೇಕ ಧಾನ್ಯಗಳಲ್ಲಿ ಹೇರಳ ಪೌಷ್ಟಿಕಾಂಶ ಇದೆ. ಇಂಥ ಆಹಾರವನ್ನು ಎಲ್ಲ ಮಕ್ಕಳಿಗೂ ವಿತರಿಸಿದರೆ ಅವರು ಶಾರೀರಿಕ, ಬೌದ್ಧಿಕ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ’ ಎಂದಿದ್ದಾರೆ.
‘ಹಿಂದೆಯೂ ಮೊಟ್ಟೆ ವಿತರಣೆ ನಿರ್ಧಾರ ಕೈಗೊಂಡಾಗ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬಳಿಕ ನಿರ್ಧಾರ ಹಿಂಪಡೆಯಲಾಯಿತು. ಈಗಲೂ ನಿರ್ಧಾರವನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.