ಬೀದರ್: ಕಲಬುರ್ಗಿ-ಯಾದಗಿರ-ಬೀದರ್ ಹಾಲು ಒಕ್ಕೂಟಕ್ಕೆ ಬೀದರ್-ಔರಾದ್ ಉಪ ವಿಭಾಗದಿಂದ ಮಾರುತಿ ಕಾಶೆಂಪೂರ, ಮಲ್ಲಿಕಾರ್ಜುನ ಬಿರಾದಾರ (ಪರಿಹಾರ) ಹಾಗೂ ಭೀಮರಾವ್ ಬಳತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಭಾಗದ ಮೂರೂ ಸ್ಥಾನಗಳಿಗೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶುಕ್ರವಾರ ಪ್ರಕಟಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಅವರ ಸಹೋದರರಾಗಿರುವ ಮಾರುತಿ ಕಾಶೆಂಪೂರ ಸತತ ನಾಲ್ಕನೇ ಬಾರಿಗೆ ಕಲಬುರ್ಗಿ-ಯಾದಗಿರ-ಬೀದರ್ ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅವರು ಹಿಂದೆ ಎರಡು ಅವಧಿಗೆ ಕರ್ನಾಟಕ ರಾಜ್ಯ ಹಾಲು ಮಹಾಮಂಡಳದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಮಲ್ಲಿಕಾರ್ಜುನ ಬಿರಾದಾರ ಸತತ ಮೂರನೇ ಬಾರಿಗೆ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದಾರೆ. ಒಮ್ಮೆ ಅವರು ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದರು. ಮೂರು ವರ್ಷಗಳ ಕಾಲ ಕಲಬುರ್ಗಿ-ಬೀದರ್-ಯಾದಗಿರ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಸಮರ್ಥವಾಗಿ ಕೆಲಸ ಮಾಡಿದ್ದರು.
ಭೀಮರಾವ್ ಬಳತೆ ಇದೇ ಮೊದಲ ಬಾರಿಗೆ ಒಕ್ಕೂಟವನ್ನು ಪ್ರವೇಶಿಸಿದ್ದಾರೆ.