ಔರಾದ್: ರೈತರ ದೊಡ್ಡ ಹಬ್ಬಗಳಲ್ಲಿ ಒಂದಾದ ಎಳ್ಳಮಾವ್ಯಾಸೆ ಬುಧವಾರ ತಾಲ್ಲೂಕಿನಾದ್ಯಂತ ಸಂಭ್ರಮದದಿಂದ ಆಚರಿಸಲಾಯಿತು.
ಸತತ ಮೂರು ವರ್ಷಗಳಿಂದ ಬರದ ಬವಣೆಯಲ್ಲಿರುವ ರೈತರಿಗೆ ಈ ವರ್ಷ ಕೊಂಚ ನೆಮ್ಮದಿ ತಂದಿದೆ. ಜೋಳ, ಕಡಲೆ, ತೊಗರಿ ಸೇರಿದಂತೆ ವಿವಿಧ ಹಿಂಗಾರು ಬೆಳೆ ಹೆಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಮಧ್ಯೆ ಎಳ್ಳ ಅಮವಾಸ್ಯೆ ಹಬ್ಬ ಬಂದಿರುವುದು ಖುಷಿ ತಂದಿದೆ.
ಸಚಿವ ಪ್ರಭು ಚವಾಣ್ ಬೋಂತಿ ತಾಂಡಾದಲ್ಲಿ ರೈತರ ಜತೆ ಎಳ್ಳಅಮವಾಸ್ಯೆ ಆಚರಿಸಿ ಸಂಭ್ರಮಿಸಿದರು. ತಮ್ಮ ಹೊಲದಲ್ಲಿ ಭೂ ಮಾತೆಗೆ ಚರಗ ಚಲ್ಲಿ (ಪೂಜೆ) ಹಬ್ಬಕ್ಕೆ ಚಾಲನೆ ನೀಡಿದರು.
ಇಂದು ಇಡೀ ದಿನ ರೈತರ ಹೊಲಗಳಿಗೆ ಹೋಗಿ ಅವರ ಜತೆ ಕಾಲ ಕಳೆಯುತ್ತೇನೆ ಎಂದರು. ಇದೇ ವೇಳೆ ಸಚಿವರು ಕೆಲ ಹೊತ್ತು ಮಕ್ಕಳ ಜತೆ ಜೋಕಾಲಿ ಹಾಗೂ ಗಾಳಿಪಟ ಹಾರಿಸಿ ಸಂಭ್ರಮಿಸಿದರು.
ಸಾಮೂಹಿಕ ಭೋಜನ: ಎಳ್ಳ ಅಮವಾಸ್ಯೆ ಅಂಗವಾಗಿ ರೈತರು ತಮ್ಮ ಹೊಲಗಳಲ್ಲಿ ಸಾಮೂಹಿಕ ಭೋಜನ ವ್ಯವಸ್ಥೆ ಮಾಡಿದರು. ಬಜ್ಜಿ ಮತ್ತು ವಿವಿಧ ಕಾಳಿನ ಪಲ್ಲೆ, ಹೋಳಿಗೆ, ಹುಗ್ಗಿ, ತುಪ್ಪ, ಜೋಳದ ಅನ್ಯ, ಮೊಸರು, ರೊಟ್ಟಿ, ಸಜ್ಜಿ ರೊಟ್ಟಿ ತಯಾರಿಸಿ ಆಪ್ತರು, ಬಂಧು ಮಿತ್ರರಿಗೆ ಊಟ ಬಡಿಸಿದರು.
ಬೆಳಿಗ್ಗೆ ಪಾಂಡವರು ದೇವರಿಗೆ ನೈವಿದ್ಯ ಅರ್ಪಿಸಿ ಸಾಂಪ್ರದಾಯಿಕ ಗೀತೆ ಹಾಡಿ ಬೆಳೆಗಳಿಗೆ ಪೂಜೆ ಸಲ್ಲಿಸಿದರು.