ಚಿಟಗುಪ್ಪ: ‘ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಿದ್ಧತೆ ಮಾಡಿಕೊಂಡಿರಬೇಕು. ಧನಾತ್ಮಕ ಚಿಂತನೆ ಮಾಡುವ ಮನೋಭಾವ ಮೈಗೂಡಿಸಿಕೊಳ್ಳಬೇಕು’ ಎಂದು ಮನೊವೈದ್ಯ ಡಾ.ಅಭಿಜಿತ ಪಾಟೀಲ ಸಲಹೆ ನೀಡಿದರು.
ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದ ಪ್ರಶಾಂತ ಪ್ರಿಯಾ ಪ್ರೌಢ ಶಾಲೆಯಲ್ಲಿ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ,ಜೀವನ ಸಾಧನ ಶಿಕ್ಷಣ ಫೌಂಡೆಷನ್ ಆಶ್ರಯದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರ ಬರೆಯುವಾಗ ಭಯ, ಆತಂಕಗಳಿಗೆ ಅವಕಾಶ ಕೊಡದೆ ಆತ್ಮ ವಿಶ್ವಾಸದಿಂದ ನಿರಾಳ ಭಾವದಿಂದ ಎಲ್ಲವೂ ಬರೆಯಬಲ್ಲೆ ಎಂಬ ವಿಶ್ವಾಸದಿಂದ ಬರೆಯಬೇಕು’ ಎಂದರು.
ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಮಾತನಾಡಿ,‘ತರಗತಿಯ ಬೋಧನೆ ಪಠ್ಯ ವಿಷಯದ ಗ್ರಹಿಕೆಗೆ ನೆರವಾಗುತ್ತದೆ. ವಿದ್ಯಾರ್ಥಿ ಸ್ವಯಂ ಓದಿ ಅರ್ಥಮಾಡಿಕೊಳ್ಳವುದು ಪರೀಕ್ಷೆ ಯಶಸ್ವಿಗೆ ಕಾರಣವಾಗುತ್ತದೆ’ ಎಂದರು. ಶಿಕ್ಷಕ ಅನಿಲಕುಮಾರ ಸಿಂಧೆ ವಂದಿಸಿದರು.