ಬೀದರ್: ಜಿಲ್ಲಾ ಪಂಚಾಯಿತಿಯ ಇಬ್ಬರು ಸದಸ್ಯರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.
ಜಿಲ್ಲಾ ಪಂಚಾಯಿತಿಯ ಮಾಳೆಗಾಂವ್ ಕ್ಷೇತ್ರದ ಸದಸ್ಯ ವಿಜಯಕುಮಾರ ಅಣ್ಣೆಪ್ಪ ಪಾಟೀಲ ಹಾಗೂ ಬಗದಲ್ ಕ್ಷೇತ್ರದ ಸದಸ್ಯ ಅಫ್ರೋಜ್ಖಾನ್ ಉಚ್ಚಾಟನೆಗೊಂಡವರು.
ಇಬ್ಬರೂ ಬಿಜೆಪಿ ಸದಸ್ಯರೊಂದಿಗೆ ಸೇರಿಕೊಂಡು, ಕಾಂಗ್ರೆಸ್ನ ಇತರ ಸದಸ್ಯರನ್ನು ಪ್ರಚೋದಿಸಿ, ಪಕ್ಷದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವ ಕುರಿತು ದೂರುಗಳು ಬಂದಿವೆ.
ಪಕ್ಷದ ಶಿಸ್ತು ಉಲ್ಲಂಘನೆ ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಷಫಿಉಲ್ಲ ಉಚ್ಚಾಟನೆ ಆದೇಶದಲ್ಲಿ ತಿಳಿಸಿದ್ದಾರೆ.