ಬೀದರ್: ತಾಲ್ಲೂಕಿನ ಸುಲ್ತಾನಪುರ ಬಳಿ ತೆಲಂಗಾಣ ಗಡಿಯಲ್ಲಿ 16 ಕ್ವಿಂಟಲ್ ಜಿಲೆಟಿನ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
‘ಜಿ.ಕೆ.ಕನ್ಸ್ಟ್ರಕ್ಷನ್ ಅಧಿಕಾರಿಗಳಿಂದ ಕೆಲ ದಾಖಲೆಗಳನ್ನು ತರಿಸಿಕೊಂಡು ಜಿಲೆಟಿನ್ ಎಲ್ಲಿಂದ ಖರೀದಿಸಲಾಗಿದೆ? ಯಾವ ಕೆಲಸಕ್ಕೆ ಬಳಸಲಾಗುತ್ತಿತ್ತು? ಯಾವಾಗ ಅನುಮತಿ ಪಡೆಯಲಾಗಿದೆ ಇತ್ಯಾದಿ ಮಾಹಿತಿ ಕಲೆ ಹಾಕಿದ್ದೇವೆ.ಈ ವೇಳೆ ಸುರಕ್ಷತಾ ನಿಯಮ ಅನುಸರಿಸದಿರುವುದು ಕಂಡು ಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಬೀದರ್ ಗ್ರಾಮೀಣ ಪೊಲೀಸರು ಜಿ.ಕೆ.ಕನ್ಸ್ಟ್ರಕ್ಷನ್ ಮಾಲೀಕ (ಹೆಸರು ಉಲ್ಲೇಖಿಸಿಲ್ಲ), ಭೈರಾಪುರ ತಾಂಡಾದ ಶಂಕರ ಗೋವಿಂದ, ವಿಜಯಪುರ ಜಿಲ್ಲೆಯ ಸಿಂದಗಿಯ ಮಹಾದೇವ ಪಾಂಡು ರಾಠೋಡ ಹಾಗೂ ಜಿ.ಕೆ.ಕನ್ಸ್ಟ್ರಕ್ಷನ್ ವ್ಯವಸ್ಥಾಪಕ ಸೂರ್ಯಕಾಂತ ಗಣಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ನಾಲ್ವರ ಮೇಲೆ ಅಜಾಗರೂಕತೆಯಿಂದ ಸ್ಫೋಟಕಗಳನ್ನು ಸಂಗ್ರಹಿಸಿದ ಆರೋಪ ಹೊರಿಸಲಾಗಿದೆ. ತನಿಖೆ ಪ್ರಗತಿಯಲ್ಲಿರುವ ಕಾರಣ ವಿಚಾರಣಾ ಹಂತದ ಮಾಹಿತಿ ಬಹಿರಂಗ ಪಡಿಸಲಾಗದು’ ಎಂದು ಪೊಲೀಸರು ತಿಳಿಸಿದ್ದಾರೆ.