ಬೀದರ್: ಕಾರಂಜಾ ಯೋಜನೆಯಲ್ಲಿ ಸ್ವಾಧೀನಪಡಿಸಿಕೊಳ್ಳದ ಹೆಚ್ಚುವರಿ ಜಮೀನು ಜಲಾವೃತ್ತವಾಗಿರುವ ಕಾರಣ ರೈತರಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೂಚಕನಳ್ಳಿ ಹಾಗೂ ನಿರ್ದೇಶಕ ವೀರಭದ್ರಪ್ಪ ಉಪ್ಪಿನ್ ಅವರು ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕಾರಂಜಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಇರುವ ಸುಮಾರು 1,200 ಎಕರೆ ಹೆಚ್ಚುವರಿ ಜಮೀನನ್ನು ಇನ್ನೂ ಸ್ವಾಧೀನಪಡಿಸಿಕೊಳ್ಳಲಾಗಿಲ್ಲ. ಈ ಜಮೀನಿನಲ್ಲಿ ಮಳೆ ನೀರು ನಿಲ್ಲುವುದು ಆರಂಭವಾಗಿದೆ. ಬೆಳೆ ಬೆಳೆಯಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಹೈದರಾಬಾದ್ ಹಾಗೂ ಮುಂಬೈನಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಯೋಜನೆ ಸಂತ್ರಸ್ತರು ಲಾಕ್ಡೌನ್ ಪ್ರಯುಕ್ತ ಊರಿಗೆ ಮರಳಿದ್ದಾರೆ. ಅವರಿಗೆ ಮಾಡಲು ಕೆಲಸ ಇಲ್ಲ. ಇರುವ ಅತ್ಯಲ್ಪ ಜಮೀನಿನಲ್ಲೂ ನೀರು ಸಂಗ್ರಹವಾಗಿರುವುದರಿಂದ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.