ಬೀದರ್: ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಹಾಗೂ ಬೀದರ್ ಶಿಶು ಅಭಿವೃದ್ಧಿ ಯೋಜನಾಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಆಗ್ರಹಿಸಿದೆ.
ಫೆಡರೇಷನ್ ಪದಾಧಿಕಾರಿಗಳು ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಬೀದರ್ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಆಹಾರಧಾನ್ಯ ಹಾಗೂ ಮೊಟ್ಟೆ ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕೇಂದ್ರಗಳ ಬಾಡಿಗೆ, ತರಕಾರಿ, ಮಾತೃ ವಂದನ, ಭಾಗ್ಯಲಕ್ಷ್ಮಿ ಬಿಲ್, ಹಾಲು ಸರಬರಾಜು ಮೊದಲಾದ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಫೆಡರೇಷನ್ ಜಿಲ್ಲಾ ಘಟದ ಅಧ್ಯಕ್ಷೆ ಲಕ್ಷ್ಮಿ ದಂಡೆ, ಉಪಾಧ್ಯಕ್ಷೆ ಸುಲೋಚನಾ ಪೂಜಾರಿ, ಕಾರ್ಯದರ್ಶಿ ಚಂದ್ರಕಲಾ ಕಮಠಾಣೆ, ಬಸಮ್ಮ ಹಾರೂರಗೇರಿ, ಇಂದುಮತಿ, ಮನೋರಂಜಿನಿ, ಭಾರತಿ ಕಾಡವಾದ, ಮಧುಮತಿ, ಸುಜಾತ ಕುಸುಮಗಲ್ಲಿ, ಮಂಗಲಾ, ಪುಷ್ಪಾವತಿ ಮೊದಲಾದವರು ಇದ್ದರು.