ಬಸವಕಲ್ಯಾಣ (ಬೀದರ್ ಜಿಲ್ಲೆ): ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹಾಗೂ ಬಸವಕಲ್ಯಾಣ ಶಾಸಕ ಶರಣು ಸಲಗರ ಅವರ ಸಮ್ಮುಖದಲ್ಲೇ ಶನಿವಾರ ಇಲ್ಲಿ ನಡೆದ ಜಗಳಕ್ಕೆ ಸಂಬಂಧಿಸಿದಂತೆ, ಎರಡೂ ಕಡೆಯ 15 ಜನರ ವಿರುದ್ಧ ಬಸವಕಲ್ಯಾಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಖೂಬಾ ಅವರು ಬೀದರ್ನಿಂದ ವಾಹನ ರ್ಯಾಲಿ ಮೂಲಕ ನಗರಕ್ಕೆ ಬಂದಾಗ ಕೆಲವರು ಸಚಿವರ ಕಾರನ್ನು ಜಖಂಗೊಳಿಸಿ ನಂಬರ್ ಪ್ಲೇಟ್ ಕಿತ್ತು ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿ ಸಿದ್ದಾರೆ’ ಎಂದು ಸಚಿವರ ಬೆಂಬಲಿಗ ಅಮೂಲ್ ಸದಾನಂದೆ ಪೊಲೀಸರಿಗೆ ದೂರು ನೀಡಿದ್ದಾರೆ. 13 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಲಗರ ಬೆಂಬಲಿಗರಾದ ನಗರಸಭೆ ಸದಸ್ಯ ಸಿದ್ದು ಬಿರಾದಾರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಸಂತ್ರಸ್ತರು ನೀಡಿರುವ ದೂರಿನ ಮೇರೆಗೆ ಸಚಿವರ ಇಬ್ಬರು ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಾಗಿದೆ..