ಬಸವಕಲ್ಯಾಣ: `ಜಾನಪದ ಸಾಹಿತ್ಯವು ಇತಿಹಾಸ ರಚನೆಗೆ ಆಕರವಾಗಿದೆ' ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಹೇಳಿದ್ದಾರೆ.
ನಗರದ ಎಸ್ಎಸ್ಕೆ ಬಸವೇಶ್ವರ ಕಾಲೇಜಿನಲ್ಲಿ ತಾಲ್ಲೂಕು ಜಾನಪದ ಪರಿಷತ್ತಿನಿಂದ ಭಾನುವಾರ ಆಯೋಜಿಸಿದ್ದ ’ಶಾಲಾ ಕಾಲೇಜಿಗೊಂದು ಜಾನಪದ ಕಾರ್ಯಕ್ರಮ’ದಲ್ಲಿ ಮಾತನಾಡಿದರು.
`ಜಾನಪದ ಹಾಡುಗಳು ಬರೀ ಕಾಲ್ಪನಿಕ ಅಲ್ಲ. ಅದರ ರಚನೆಕಾರರು ಅನಕ್ಷರಸ್ಥರು ಇರಬಹುದು. ಅದರೂ, ಆಯಾ ಕಾಲಘಟ್ಟದ ನಿಜ ಚಿತ್ರಣ ಒದಗಿಸಿದ್ದಾರೆ. ಪ್ರಮುಖ ಘಟನೆಗಳು, ಅಂದಿನ ಜನಜೀವನದ ಬಗ್ಗೆ ಸಾಹಿತ್ಯದಲ್ಲಿ ಮಾಹಿತಿ ದೊರಕುತ್ತದೆ. ಈ ಭಾಗದ ಗೋರಟಾ ಹತ್ಯಾಕಾಂಡದ ಬಗ್ಗೆ ಭುಲಾಯಿ ಪದಗಳಲ್ಲಿ ಸಂಪೂರ್ಣ ಉಲ್ಲೇಖವಿದೆ. ಆದ್ದರಿಂದ ಜಾನಪದ ಸಾಹಿತ್ಯ, ಕಲೆ ಸಂರಕ್ಷಿಸಬೇಕಾಗಿದೆ. ಆಧುನಿಕತೆಯ ಭರಾಟೆಯಲ್ಲಿ ಇಂಥ ನೆಲಮೂಲ ಸಂಸ್ಕೃತಿ ಅಳಿಯಬಾರದು' ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಮಾತನಾಡಿ, `ಜಾನಪದ ಸಂಸ್ಕಾರ ನೀಡುತ್ತದೆ. ನೈತಿಕ ಮೌಲ್ಯ ಬಿತ್ತುತ್ತದೆ. ಒಗಟು, ಗಾದೆಗಳು, ಭುಲಾಯಿಪದ, ಹಂತಿಪದ, ಮೋಹರಂ ಪದ ಇವೆಲ್ಲ ಜಾನಪದದ ಅವಿಭಾಜ್ಯ ಅಂಗಗಳು. ಜಾನಪದ ಸಾಹಿತ್ಯ ಉತ್ತಮ ಜೀವನಕ್ಕೆ ಮಾರ್ಗದರ್ಶಿ ಸೂತ್ರ' ಎಂದು ಹೇಳಿದರು.
ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಬಸವರಾಜ ಸ್ವಾಮಿ ಮಾತನಾಡಿ, `ಗ್ರಾಮೀಣ ಆಹಾರ ಪದ್ಧತಿಯು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತದೆ' ಎಂದರು.
ಪ್ರಾಧ್ಯಾಪಕ ವಿಠೋಬಾ ದೊಣ್ಣೆಗೌಡರ್, ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ಕಾರ್ಯದರ್ಶಿ ದೇವೀಂದ್ರ ಬರಗಾಲೆ, ಉಪನ್ಯಾಸಕಿ ಸರಸ್ವತಿ, ಲಕ್ಷ್ಮಿಬಾಯಿ ಪಾಟೀಲ ಮಾತನಾಡಿದರು.
ಸಾಹಿತಿ ವೀರಣ್ಣ ಕುಂಬಾರ ಜಾನಪದ ಗೀತೆ ಹಾಡಿದರು. ಪ್ರಾಂಶುಪಾಲ ಬಸವರಾಜ ಎವಲೆ, ಶಿವಕುಮಾರ ಪಾಟೀಲ, ರಾಜಕುಮಾರ ಬಿರಾದಾರ, ಅಂಬರೀಶ ಭೀಮಾಣೆ, ಶಿವರಾಜ ಖೇಲೆ, ಲಕ್ಷ್ಮಿಬಾಯಿ ಭಂಕೂರ, ಸೂರ್ಯಕಾಂತ ನಾಸೆ, ಶಿವಾನಂದ ಬಿರಾದಾರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.