ಬೀದರ್: ಇಲ್ಲಿಯ ವಾಲಿಶ್ರೀ ಆಸ್ಪತ್ರೆಯಲ್ಲಿ ಸಕಲ ಚಿಕಿತ್ಸಾ ಸೌಲಭ್ಯ ಲಭ್ಯ ಇದ್ದು, ರೋಗಿಗಳು ಹೈದರಾಬಾದ್ ಹಾಗೂ ಸೋಲಾಪುರಕ್ಕೆ ಹೋಗುವ ಅಗತ್ಯ ಇಲ್ಲ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ರಾಜಶೇಖರ ಸೇಡಂಕರ್ ಹೇಳಿದರು.
ಸರ್ಕಾರ ನಿಗದಿಪಡಿಸಿದ ದರದಲ್ಲೇ ಆಸ್ಪತ್ರೆಯಲ್ಲಿ ನ್ಯೂರೋ ಸರ್ಜರಿ ಕ್ಯಾಥ್ಲ್ಯಾಬ್ ಸೌಲಭ್ಯ ಒದಗಿಸಲಾಗುತ್ತಿದೆ. ಸಾವಿರಾರು ರೋಗಿಗಳಿಗೆ ಇದರ ನೆರವಿನಿಂದ ಚಿಕಿತ್ಸೆ ಒದಗಿಸಲಾಗಿದೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಸ್ಪತ್ರೆಯಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ನಿಗಾ ಘಟಕ, ಅಪಘಾತ ನಿಗಾ ಘಟಕ, ಹೃದಯ, ಹೆರಿಗೆ ಘಟಕ, 2ಡಿ ಇಕೋ ಟಿಎಂಟಿ, ಎಕ್ಸ್ರೇ, ಇಸಿಜಿ, ಕಾರ್ಡಿಯಾಲ್ ಕನ್ಸಲ್ಟೇಷನ್ ಮೊದಲಾದ ಸೌಕರ್ಯಗಳು ಇವೆ. 14 ಜನ ನುರಿತ ವೈದ್ಯರು ಇದ್ದಾರೆ ಎಂದು ಹೇಳಿದರು.
ವಾಲಿಶ್ರೀ ಹೆಲ್ತ್ ಕಾರ್ಡ್ ಉಚಿತವಾಗಿ ಕೊಡಲಾಗುತ್ತಿದೆ. ಈ ಕಾರ್ಡ್ ಹೊಂದಿದವರಿಗೆ ಕಡಿಮೆ ಶುಲ್ಕದಲ್ಲಿ ವೈದ್ಯಕೀಯ ಸೇವೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ನಗರದ ರೋಗಿಗಳ ಅನುಕೂಲಕ್ಕಾಗಿ ಹಮಿಲಾಪುರ ವರ್ತುಲ ರಸ್ತೆ, ನೌಬಾದ್ ವರ್ತುಲ ರಸ್ತೆ, ಗುಂಪಾ ವರ್ತುಲ ರಸ್ತೆ ಹಾಗೂ ಹಳೆ ನಗರದಲ್ಲಿ ಉಚಿತ ತುರ್ತು ಆಂಬುಲನ್ಸ್ ಸೇವೆ ಒದಗಿಸಲಾಗುತ್ತಿದೆ. ರೋಗಿಗಳು ಆಂಬುಲನ್ಸ್ ಸೇವೆಗೆ ಮೊಬೈಲ್ ಸಂಖ್ಯೆ 9379124050 ಗೆ ಸಂಪರ್ಕಿಸಬಹುದು ಎಂದು ಹೇಳಿದರು.
ಡಾ. ಪ್ರಸನ್ನ, ಡಾ. ಶ್ರೀಕಾಂತ ರೆಡ್ಡಿ, ಡಾ.ಶಿವಶಾಂತಕುಮಾರ ಎಲ್, ಡಾ. ಸುಪ್ರೀತ್ ಹುಗ್ಗೆ, ಡಾ. ಅವಿನಾಶ, ಆಸ್ಪತ್ರೆ ಆಡಳಿತಾಧಿಕಾರಿ ಬಿನಲ್ ರಶೀದ್ ಇದ್ದರು.