ಬೀದರ್: ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಕೋವಿಡ್ ವೇಳೆ ಆಸ್ಪತ್ರೆಗಳಿಗೆ ಆಮ್ಲಜನಕ, ಆಮ್ಲಜನಕ ಕಾನ್ಸೆಂಟ್ರೇಟರ್ ಯಂತ್ರ ವಿತರಣೆ ಸೇರಿದಂತೆ ವಿವಿಧ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ಹೇಳಿದರು.
ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಐದು ಆಮ್ಲಜನಕ ಕಾನ್ಸೆಂಟ್ರೇಟರ್ ಯಂತ್ರಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ವತಿಯಿಂದ ಕೆರೆ ಹೂಳೆತ್ತುವ ಕಾಮಗಾರಿ, ಸಮುದಾಯ ಭವನ ನಿರ್ಮಾಣಕ್ಕೂ ನೆರವು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಯೋಜನೆ ವತಿಯಿಂದ ಚೌಳಿ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ವಿಶ್ವಕರ್ಮ ಸಮಾಜ ಸಮುದಾಯ ಭವನಕ್ಕೆ ನೀಡಲಾದ ₹ 5 ಲಕ್ಷ ಸಹಾಯಧನದ ಚೆಕ್ನ್ನು ಸಂಬಂಧಪಟ್ಟವರಿಗೆ ವಿತರಿಸಿದರು. ಭವನಕ್ಕೆ ಶಾಸಕರ ನಿಧಿಯಿಂದಲೂ ₹ 5 ಲಕ್ಷ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಯೋಜನೆಯ ಶ್ರೀನಿವಾಸ ಇದ್ದರು.