ಔರಾದ್: ‘ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿಯವರಿಗೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು’ ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ವಗ್ಗೆ, ತುಕಾರಾಮ ಹಸನ್ಮುಖಿ, ಗಣಪತಿ ವಾಸುದೇವ, ಸುಭಾಷ ಲಾಧಾ ಅವರು ಶುಕ್ರವಾರ ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ತಾಲ್ಲೂಕಿನಾದ್ಯಂತ ಪರಿಶಿಷ್ಟ ಜಾತಿಯವರು ಶವ ಸಂಸ್ಕಾರಕ್ಕಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ಜಾಗ ಸಿಗದೆ ಎರಡೆರಡು ದಿನ ಶವ ಮನೆಯಲ್ಲೇ ಇಟ್ಟುಕೊಳ್ಳುವ ಪ್ರಸಂಗ ಬಂದಿದೆ. ಈ ವಿಷಯ ಅಧಿಕಾರಿಗಳ ಗಮನಕ್ಕೂ ಬಂದಿದೆ. ಹೀಗಾಗಿ ಮುಂದೆ ಇಂಥ ಸಮಸ್ಯೆ ಆಗದಂತೆ ತಾಲ್ಲೂಕಿನ ಎಲ್ಲ ಊರುಗಳಲ್ಲಿ ಸ್ಮಶಾನ ಭೂಮಿ ವ್ಯವಸ್ಥೆ ಮಾಡಬೇಕು. ಆದಷ್ಟು ಬೇಗ ಈ ಕೆಲಸ ಆಗಬೇಕು. ಇಲ್ಲವಾದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.