ಬೀದರ್: ಪತಂಜಲಿ ಯೋಗ ಪೀಠ ಹಾಗೂ ಪಡಗಾನೂರದ ವಿಪಸ್ಸನ ಯೋಗ ಸೇವಾ ಸಂಸ್ಥೆ ಸಹಯೋಗದಲ್ಲಿ ನಗರದ ಎರಡು ಕಡೆ ಹಮ್ಮಿಕೊಂಡಿರುವ ಶೂನ್ಯ ಸಂಪಾದನೆ ಧ್ಯಾನ ಯೋಗ ಉಚಿತ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆ 6.30 ರಿಂದ 7.30ರ ವರೆಗೆ ರಾಘವೇಂದ್ರ ಸ್ವಾಮಿ ಮಠ ಹಾಗೂ ಸಂಜೆ 6 ರಿಂದ 7 ರ ವರೆಗೆ ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ನೂರಾರು ಜನ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ವಿಜಯಪುರದ ಬಿಎಲ್ಡಿ ಮೆಡಿಕಲ್ ಕಾಲೇಜಿನ ಯೋಗ ಇನ್ಸ್ಟ್ರಕ್ಟರ್ ಮಡಿವಾಳ ದೊಡ್ಡಮನಿ ಧ್ಯಾನ ಯೋಗ ನಡೆಸಿಕೊಡುತ್ತಿದ್ದಾರೆ.
ಪ್ರಸ್ತುತ ಮಾನಸಿಕ ಒತ್ತಡ ಹೆಚ್ಚಾಗಿದೆ. ಒತ್ತಡ ಮುಕ್ತಿಗೆ ಧ್ಯಾನ ಯೋಗ ಶಿಬಿರ ಸಹಕಾರಿಯಾಗಲಿದೆ. ಅನೇಕ ರೋಗಗಳ ನಿವಾರಣೆಗೂ ನೆರವಾಗಲಿದೆ ಎಂದು ಶಿಬಿರದ ಆಯೋಜಕರಲ್ಲಿ ಒಬ್ಬರಾದ ಪತಂಜಲಿ ಯೋಗ ಪೀಠದ ಶ್ರೀಕಾಂತ ಮೋದಿ ತಿಳಿಸಿದರು.
ಭಾರತ ಸ್ವಾಭಿಮಾನ ಆಂದೋಲನದ ಜಿಲ್ಲಾ ಘಟಕದ ಅಧ್ಯಕ್ಷ ಗಣಪತರಾವ್ ಖೂಬಾ, ಪ್ರಶಾಂತ ಹೊಳಸಮುದ್ರ ಮತ್ತಿತರರು ಶಿಬಿರದ ಮುಂದಾಳತ್ವ ವಹಿಸಿದ್ದಾರೆ. ಸಾರ್ವಜನಿಕರು ಡಿ. 30 ವರೆಗೆ ನಡೆಯಲಿರುವ ಶಿಬಿರದ ಸದುಪಯೋಗ ಪಡೆಯಬೇಕು ಎಂದು ಕೋರಿದರು.
ಶಿಬಿರದ ಪ್ರಯುಕ್ತ ಪ್ರತಿ ದಿನ ಮಧ್ಯಾಹ್ನ ಮಡಿವಾಳ ದೊಡ್ಡಮನಿ ಅವರೊಂದಿಗೆ ಶಾಲಾ- ಕಾಲೇಜುಗಳಿಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿ ವೃದ್ಧಿ, ಭಕ್ತಮುಕ್ತರಾಗಿ ಪರೀಕ್ಷೆ ಎದುರಿಸುವ ಬಗೆಯನ್ನು ಹೇಳಿಕೊಡಲಾಗುತ್ತಿದೆ ಎಂದು ತಿಳಿಸಿದರು.