ಭಾಲ್ಕಿ: ಪಟ್ಟಣದ ಯೋಗ ಗುರು ಹರಿದೇವ ಶಿವಾಜಿರಾವ್ ರುದ್ರಮಣಿ ಅವರಿಗೆ ಯೋಗ 13 ವರ್ಷಗಳಿಂದ ಜೀವನದ ಭಾಗವಾಗಿದೆ. ಯೋಗದಿಂದ ಉತ್ತಮ ಆರೋಗ್ಯ ಕಾಯ್ದುಕೊಂಡಿರುವ ಅವರು ಜನರಿಗೂ ಉಚಿತವಾಗಿ ಯೋಗ ಹೇಳಿಕೊಡುತ್ತಾರೆ.
‘ನನಗೆ ಪದೇ ಪದೇ ಮೆದುಳಿನ ಸಮಸ್ಯೆ ಬಾಧಿಸುತ್ತಿದ್ದ ಕಾರಣ ದೇಹಕ್ಕೆ ತುಂಬಾ ಆಯಾಸವಾಗುತ್ತಿತ್ತು. ಬಹುತೇಕ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಜೀವನದ ಬಗ್ಗೆ ಉತ್ಸಾಹ ಕಳೆದುಕೊಂಡೆ. ಆಗ ಹಿರಿಯರು ಯೋಗದ ಮೊರೆ ಹೋಗಲು ಸಲಹೆ ನೀಡಿದರು. 2006ರಲ್ಲಿ ಹರಿದ್ವಾರದಲ್ಲಿ 20 ದಿನ ಉಳಿದು ಯೋಗ ಕಲಿತ್ತಿದ್ದೇನೆ’ ಎಂದು ಯೋಗಗುರು ಹರಿದೇವ ರುದ್ರಮಣಿ ತಿಳಿಸಿದರು.
‘ಕಲಿತ ಯೋಗವನ್ನು ಸಾರ್ವಜನಿಕರಿಗೂ ಕಲಿಸುವ ಉದ್ದೇಶವಿದೆ. ಚರ್ಚ್, ಮಸೀದಿ, ಚನ್ನಬಸವಾಶ್ರಮ, ನ್ಯಾಯಾಲಯದ ಆವರಣ ಮುಂತಾದ ಕಡೆ ಅಲ್ಲದೇ ಆನ್ಲೈನ್ ಮೂಲಕವೂ ಜನರಿಗೆ ಯೋಗ ಕಲಿಸುತ್ತೇನೆ’ ಎಂದರು.
‘ಶ್ವಾಸಕೋಶಕ್ಕೆ ಸಂಬಂಧಿಸಿದ ಕೋವಿಡ್ನಂತಹ ರೋಗಗಳನ್ನೂ ಸಹ ಯೋಗ ಮಾಡುವುದರಿಂದ ಪರಿಹರಿಸಿಕೊಳ್ಳಬಹುದು. ಭಸ್ತ್ರಿಕಾ ಪ್ರಾಣಾಯಾಮ ಮಾಡುವುದರಿಂದ ಶ್ವಾಸಕೋಶಕ್ಕೆ ಅಗತ್ಯ ಆಮ್ಲಜನಕ ತಲುಪಿ, ರಕ್ತ ಸಂಚಾರ ಹೆಚ್ಚಾಗುತ್ತದೆ. ಮೂಗು, ಗಂಟಲು, ಶ್ವಾಸಕೋಶ ಶುದ್ಧವಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.
‘ಕಪಾಲಭಾತಿ ಆಸನದಿಂದ ಮುಖ, ಶರೀರದ ತೇಜಸ್ಸು ಹೆಚ್ಚುತ್ತದೆ. ಇದನ್ನು ನಿತ್ಯ 10ರಿಂದ 15 ನಿಮಿಷ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಕಪಾಲಭಾತಿಯನ್ನು ಆರೋಗ್ಯ ಸಂಜೀವಿನಿ ಎಂದು ಕರೆಯುತ್ತೇವೆ’ ಎಂದರು.
‘ಯೋಗಾಸಕ್ತರು ಪ್ರತಿದಿನ ಬೆಳಿಗ್ಗೆ 5.30 ರಿಂದ 6.30 ಗಂಟೆಯ ವರೆಗೆ ಚನ್ನಬಸವಾಶ್ರಮದಲ್ಲಿನಡೆಯುವ ಯೋಗ ವರ್ಗಕ್ಕೆ ಉಚಿತವಾಗಿ ಸೇರಿ ಸದೃಢ ಆರೋಗ್ಯ, ಚೈತನ್ಯಾತ್ಮಕ ಮನಸ್ಸು, ತೇಜಸ್ಸುಳ್ಳಮುಖ ತಮ್ಮದಾಗಿಸಿಕೊಳ್ಳಬಹುದು’ಎಂದುಕೋರಿದರು.