ಖಟಕಚಿಂಚೋಳಿ: ಇಲ್ಲಿಯ ಬಸವೇಶ್ವರ ವೃತ್ತದ ಬಳಿ ಮಂಗಳವಾರ ಕಲಬುರಗಿಯ ಮಕ್ಕಳ ತಜ್ಞ ಡಾ.ದಿನಕರ ಮೊರೆ ಮಕ್ಕಳ ಉಚಿತ ಆರೋಗ್ಯ ತಪಾಸಣೆ ನಡೆಸಿದರು.
ಡಾ.ದಿನಕರ ಮೊರೆ ಮಾತನಾಡಿ,‘ನಾನು ಸುಮಾರು 40 ವರ್ಷಗಳಿಂದ ಕಲಬುರಗಿಯಲ್ಲಿ ವಾಸಿಸುತ್ತಿದ್ದೇನೆ. ಮಕ್ಕಳ ವೈದ್ಯನಾದ ನಾನು ನನ್ನ ತಾಲ್ಲೂಕಿನ ಜನರಿಗೆ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ಈ ಶಿಬಿರ ನಡೆಸುತ್ತಿದ್ದೇನೆ’ ಎಂದರು.
ನವೆಂಬರ್ 9ರಿಂದ 16ರವರೆಗೆ ಪ್ರತಿಯೊಂದು ಹೋಬಳಿಯಲ್ಲಿ ಉಚಿತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿದ್ದೇನೆ ಎಂದು ಮಾಹಿತಿ ನೀಡಿದರು.
ವೈದ್ಯರು ಕಣ್ಣಿಗೆ ಕಾಣುವ ದೇವರು ಎನ್ನುವ ನಂಬಿಕೆಯಿದೆ. ಅದನ್ನು ಡಾ ದಿನಕರ್ ಮೊರೆ ಅವರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಸಾಬೀತುಪಡಿಸಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದು ಚಳಕಾಪುರವಾಡಿ ಗ್ರಾಮದ ಅನಿಲ ಜಾಧವ ತಿಳಿಸಿದರು.
ಶಿಬಿರದಲ್ಲಿ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಮಕ್ಕಳನ್ನು ಕರೆದುಕೊಂಡು ಬಂದು ಆರೋಗ್ಯ ತಪಾಸಣೆ ಮಾಡಿಸಿದರು.