ಬೀದರ್: ಜಿಲ್ಲೆಯ ಬೀದರ್, ಭಾಲ್ಕಿ, ಹುಲಸೂರು ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.
ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಸಮೀಪದ ದಾಡಗಿ ಗ್ರಾಮದಲ್ಲಿ ಕಾರಂಜಾ ಜಲಾಶಯದ ಚಿಕ್ಕ ಕಾಲುವೆ ಮಳೆಗೆ ಒಡೆದು ಹೊಲಗಳಿಗೆ ನೀರು ನುಗ್ಗಿ ಬೆಳೆ ಕೊಚ್ಚಿಕೊಂಡು ಹೋಗಿವೆ.
ಬೀದರ್ ತಾಲ್ಲೂಕಿ ಮರಕಲ್ ಗ್ರಾಮದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿನ ಆಹಾರಧಾನ್ಯಗಳು ನೀರು ಪಾಲಾಗಿವೆ. ಮನೆಯಲ್ಲಿ ಮೊಣಕಾಲಷ್ಟು ನೀರು ನಿಂತಿರುವ ಕಾರಣ ಕುಟುಂಬಗಳು ಕಂಗಾಲಾಗಿವೆ.
ಬೀದರ್ನ ಓಲ್ಡ್ ಸಿಟಿಯಲ್ಲಿ ಮಳೆಗೆ ಗಟಾರಗಳು ಉಕ್ಕಿ ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.ಚೌಬಾರಾದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.
ಶುಕ್ರವಾರ ರಾತ್ರಿಯಿಡೀ ಸುರಿದಿರುವ ಮಳೆ ಬೆಳಿಗ್ಗೆ ಎರಡು ತಾಸು ಬಿಡುವು ನೀಡಿತ್ತು. ಶನಿವಾರ 10 ಗಂಟೆಯಿಂದ ಮತ್ತೆ ನಿರಂತರವಾಗಿ ಸುರಿಯುತ್ತಿದೆ. ಬೀದರ್, ಭಾಲ್ಕಿ, ಹುಲಸೂರು ಹಾಗೂ ಹುಮನಾಬಾದ್ ತಾಲ್ಲೂಕಿನ ಹೊಲಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿದೆ.