ಕಾರಹುಣ್ಣಿಮೆಯ ಆರನೇ ದಿನಕ್ಕೆ ಖೇಡ್ ಗ್ರಾಮದಲ್ಲಿ ಈ ದಾಸೋಹ ಅಂಗವಾಗಿ ಹೋಳಿಗೆ-ತುಪ್ಪದ ಜಾತ್ರೆ ಹದಿನೇಳು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಜಾತ್ರೆಗೆ ಕರ್ನಾಟಕ ಅಲ್ಲದೇ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಂದಲೂ ಜನರು ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಾರೆ. ಬಂದವರಿಗೆಲ್ಲಾ ಮುಂಜಾನೆಯಿಂದ ಇಳಿಹೊತ್ತಿನವರೆಗೂ ಉಂಡಷ್ಟು ಹೋಳಿಗೆ, ಹೋಳಿಗೆಗೆ ಬಟ್ಟಲು ಬಟ್ಟಲು ತುಪ್ಪ ಸುರಿದು ಸಂತೃಪ್ತಪಡಿಸುತ್ತಾರೆ ಖೇಡ್ ಗ್ರಾಮಸ್ಥರು. ‘ಹೈದರಾಬಾದ್ನಿಂದ 15 ಕೆ.ಜಿ.ಯ 10 ಡಬ್ಬಿ ತುಪ್ಪ ಅಂದರೆ 150 ಕೆ.ಜಿ ಹಾಗೂ 750 ಕೆ.ಜಿ. ಕಡಲೆ ಬೇಳೆ, 750 ಕೆಜಿ.ಸಕ್ಕರೆ ಹಾಗೂ 750 ಕೆ.ಜಿ ಅಕ್ಕಿಯನ್ನು ದಾಸೋಹಕ್ಕಾಗಿ ತಂದಿದ್ದೇವೆ’ ಎಂದು ಮುಖಂಡ ಶರಣಪ್ಪ ಬಸನಾಳೆ, ಬಸವರಾಜ ಜಾಜೆ ಹಾಗೂ ವೀರೇಂದ್ರ ಬಿರಾದಾರ ತಿಳಿಸಿದ್ದಾರೆ. ಗ್ರಾಮದ ತುಂಬೆಲ್ಲ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಜಾತ್ರೆಗೆ ಸುಮಾರು 30 ಸಾವಿರ ಭಕ್ತಾದಿಗಳು ಸೇರಿದ್ದರು ಎಂದು ಅಂದಾಜಿಸಲಾಗಿದೆ. ಜಾತ್ರೆಗೆ ಉತ್ತರಾಖಂಡದ ಕೇದಾರನಾಥ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರು ಆಗಮಿಸಿದ್ದರು. ಭಕ್ತರಿಗೆ ಕಾಯಕ ಮತ್ತು ದಾಸೋಹವನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಹೋಗಬೇಕೆಂದು ಆಶೀರ್ವಚನ ನೀಡಿದರು.