ಬೀದರ್: ಜಿಲ್ಲೆಯ ಅನೇಕ ಸಮಸ್ಯೆಗಳನ್ನು ಬಗೆಹರಿಸದೆ ಬೀದರ್ ಉತ್ಸವ ನಡೆಸುವುದು ಸೂಕ್ತವೇ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಪ್ರಶ್ನಿಸಿದ್ದಾರೆ.
ಬೀದರ್ ಉತ್ಸವಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ, ನಗರದ ರಸ್ತೆ ಹಾಗೂ ಬ್ರಿಮ್ಸ್ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವವರ ಗೋಳನ್ನು ಸರ್ಕಾರ, ಜನಪ್ರತಿನಿಧಿಗಳು ಕೇಳುತ್ತಿಲ್ಲ. ರಸ್ತೆಗಳಲ್ಲಿ ತಗ್ಗು, ದಿನ್ನೆಗಳು ನಿರ್ಮಾಣಗೊಂಡು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿ ಸಭೆ ಕರೆದು ಗ್ರಾಮ ಲೆಕ್ಕಾಧಿಕಾರಿ, ವಾರ್ಡ್ನ್ಗಳಿಗೆ ₹ 10 ಸಾವಿರ, ಪಿಡಿಒಗಳಿಗೆ ₹ 1,5000 ಹಾಗೂ ಇನ್ನುಳಿದ ನೌಕರರಿಗೆ ಪ್ರತ್ಯೇಕ ದರ ನಿಗದಿ ಮಾಡಿ ಮೌಖಿಕ ಆದೇಶ ನೀಡಿದ್ದಾರೆ ಎಂದು ಕೇಳಿ ಬರುತ್ತಿದೆ. ರಾಜ್ಯದಲ್ಲಿ ಶೇ 40 ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದು, ಇದರಿಂದ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಭ್ರಷ್ಟಾಚಾರ ನಡೆಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಉತ್ಸವಕ್ಕೆ ಕೆಲ ಶಾಸಕರು ಹಾಗೂ ಸಂಸದರು ಸಹಕಾರ ನೀಡುತ್ತಿದ್ದು, ಜಿಲ್ಲೆಯ ರೈತರು, ಜನರ ಬಗ್ಗೆ ಕಾಳಜಿ ಇಲ್ಲದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದ ನಂತರ ಉತ್ಸವ ಮಾಡಿದರೆ ಎಲ್ಲರೂ ಪಾಲ್ಗೊಳ್ಳಬಹುದು. ಉತ್ಸವ ಕುರಿತು ಕೂಲಂಕಷ ಚರ್ಚಿಸಬೇಕು. ಸದ್ಯ ಚುನಾವಣೆ ಹತ್ತಿರ ಇವೆ. ಇಂತಹ ಸಮಯದಲ್ಲಿ ರೈತರು ಹಾಗೂ ಸಾರ್ವಜನಿಕರನ್ನು ಕಡೆಗಣಿಸುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.