ಬೀದರ್: ಐಟಿಐ ಕುಶಲಕರ್ಮಿಗಳು ತಮ್ಮ ಜೀವನದ ಕನಸುಗಳನ್ನು ನನಸಾಗಿಸಿಕೊಳ್ಳಲು ಮರ್ಚಂಟ್ ನೆವಿಗೆ ಸೇರಲು ಅಣಿಯಾಗಬೇಕು ಎಂದು ಮರ್ಚಂಟ್ ಆ್ಯಂಡ್ ನೆವಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಮಹೇಶ ಹೇಳಿದರು.
ಇಲ್ಲಿಯ ಸರ್ಕಾರಿ ಐಟಿಐನಲ್ಲಿ ಹುಬ್ಬಳ್ಳಿಯ ಸಿಮನ್ ಸ್ಟಫಿಂಗ್ ಸಲ್ಯೂಷನ್ಸ್ ಸಹಯೋಗದಲ್ಲಿ ಐಟಿಐ ಕುಶಲಕರ್ಮಿಗಳಿಗೆ ಏರ್ಪಡಿಸಿದ್ದ ಮರ್ಚಂಟ್ ನೆವಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಐಟಿಐ ತೇರ್ಗಡೆಯಾದ 18 ರಿಂದ 25 ವರ್ಷದ ಒಳಗಿನ ಅಭ್ಯರ್ಥಿಗಳು 6 ತಿಂಗಳ ತರಬೇತಿ ಪೂರೈಸಿದರೆ ಕಿರಿಯ ತಂತಜ್ಞಾನ ಶಿಲ್ಪಿ ಆಗಬಹುದು. ಆಯ್ದ ಮರ್ಯೆನ್ ಕಂಪನಿ, ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು ಎಂದು ತಿಳಿಸಿದರು.
ಹುಬ್ಬಳ್ಳಿಯ ಸಿಮನ್ ಸ್ಟಫಿಂಗ್ ಸಲ್ಯೂಷನ್ಸ್ ವ್ಯವಸ್ಥಾಪಕ ಮಂಜುನಾಥ ಮಾತನಾಡಿ, ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರಿನಲ್ಲಿ ತರಬೇತಿ ಲಭ್ಯ ಇದೆ. ನೌಕಾ ಸೇವೆ ಒಳ್ಳೆಯ ಕೆಲಸವಾಗಿದೆ. ನೌಕರಿಗೆ ಸೇರಿದವರಿಗೆ ಮೊದಲ ಸಂಬಳವೇ ಮಾಸಿಕ ರೂ. 74 ಸಾವಿರ ಇದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಐಟಿಐ ಜಿಲ್ಲಾ ನೋಡಲ್ ಅಧಿಕಾರಿ ಶಿವಶಂಕರ ಟೋಕರೆ ಮಾತನಾಡಿ, ಎಲೆಕ್ಟ್ರಿಷಿಯನ್, ಇ.ಎಂ. ವೃತ್ತಿಯಲ್ಲಿ ತರಬೇತಿ ಪಡೆದವರಿಗೆ ಮರ್ಚಂಟ್ ನೆವಿ ಸುವರ್ಣ ಅವಕಾಶವಾಗಿದೆ. ಕುಶಲಕರ್ಮಿಗಳು ಕಷ್ಟಪಟ್ಟರೆ ಜೀವನಕ್ಕೆ ಹೊಸ ಮೆರುಗು ಸಿಗಲಿದೆ ಎಂದು ನುಡಿದರು.