ಬಸವಕಲ್ಯಾಣ: ‘ದಾದಾಸಾಹೇಬ್ ಕಾನ್ಶಿರಾಂ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೈಕಲ್ನಲ್ಲಿ ಸಂಚರಿಸಿ ಬಹುಜನ ಸಮಾಜ ಪಕ್ಷವನ್ನು ಆನೆಯಂತೆ ಬೆಳೆಸಿ ಪರಿಶಿಷ್ಟರಿಗೆ ಧ್ವನಿಯಾದ ಕೀರ್ತಿಗೆ ಭಾಜನರಾಗಿದ್ದಾರೆ’ ಎಂದು ಬಿ.ಎಸ್.ಪಿ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಮಾರುತಿ ಕಾಂಬಳೆ ಅವರು ಹೇಳಿದರು.
ಇಲ್ಲಿನ ಬಿ.ಎಸ್.ಪಿ ಕಚೇರಿಯಲ್ಲಿ ಶನಿವಾರ ನಡೆದ ಕಾನ್ಶಿರಾಂ ಅವರ ಪರಿನಿರ್ವಾಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಕಾನ್ಶಿರಾಂ ಸರಳ ಜೀವಿಯಾದರೂ ಸ್ವಾಭಿಮಾನಿ ಆಗಿದ್ದರು. ಬಹುಜನ ಸಮಾಜದವರು ಬಹುಸಂಖ್ಯೆಯಲ್ಲಿ ಇದ್ದರೂ ಅಧಿಕಾರದಿಂದ ವಂಚಿತರಾಗಿರುವುದನ್ನು ಕಂಡರು. ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಲ್ಲದೆ ಎಲ್ಲ ರೀತಿಯಿಂದ ಹಿಂದುಳಿದಿರುವುದನ್ನು ನೋಡಿ ರಾಜಕೀಯದ ಚುಕ್ಕಾಣಿ ಹಿಡಿಯಲು ಪ್ರಯತ್ನಿಸಿ ಯಶಸ್ಸು ಕಂಡರು. ಅವರ ಪಕ್ಷದ ಮಾಯಾವತಿ ಅವರು ದೇಶದ ದೊಡ್ಡ ರಾಜ್ಯ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕು ಸಲ ಅಧಿಕಾರ ಹಿಡಿದಿರುವುದೇ ಇದಕ್ಕೆ ಸಾಕ್ಷ್ಯಿ. ಅವರು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ’ ಎಂದು ಹೇಳಿದರು.
‘ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತದೆ. ಆದ್ದರಿಂದ ಕಾರ್ಯಕರ್ತರು ಪಕ್ಷವನ್ನು ಬಲಗೊಳಿಸಬೇಕು’ ಎಂದು ಅವರು ಹೇಳಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಸುಂಠಾಣೆ ಮಾತನಾಡಿದರು.
ಶಂಭು ಖೇಳಗಿಕರ, ಅಭಿ ಅಣಕಲ್, ವಿಜಯ ಕಾಂಬಳೆ, ಆದರ್ಶ ಗಾಯಕವಾಡ, ಸತ್ಯಪಾಲ, ವಿನೋದ ಕಾಂಬಳೆ, ಶಿವರಾಜ ರಾಚಪ್ಪನೋರ್, ಅಜೀತ ಗಾಯಕವಾಡ, ನಾಗೇಶ ಸೂರ್ಯವಂಶಿ, ಅಖಿಲೇಶ ಬಸವಗಲ್ಲಿ, ಅವಿಷ್ಕಾರ ಮಂದಿರಕರ, ಚೇತನ ಅಣಕಲ ಹಾಗೂ ಶ್ರೀಕಾಂತ ಸೇರಿ ಹಲವರು ಇದ್ದರು.