ಬೀದರ್: ಜಿಲ್ಲೆಯ ವಿವಿಧೆಡೆ ಶನಿವಾರ ಬೆಳಗಿನ ಜಾವ ಧಾರಾಕಾರ ಮಳೆಯಾಗಿದೆ. ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿದೆ. ಔರಾದ್ ತಾಲ್ಲೂಕಿನ ಬೆಳಕುಣಿ ಸಮೀಪದ ಚಿಕ್ಕ ಸೇತುವೆ ಕುಸಿದಿದೆ.
ಔರಾದ್ ತಾಲ್ಲೂಕಿನ ಖಾಶೆಂಪುರ ಬಳಿ ಸೇತುವೆ ಮುಳುಗಿ ಕೆಲ ಗ್ರಾಮಗಳ ಸಂಪರ್ಕ ಕಡಿದು ಹೋಗಿದೆ. ಬೆಳಕುಣಿ ಬಳಿ ಸೇತುವೆ ಭಾಗಶಃ ಕುಸಿದು ಬಿದ್ದಿದೆ. ಹೊಲಗಳಲ್ಲಿ ನೀರು ನುಗ್ಗಿದೆ. ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿದೆ.
ತಾಲ್ಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ ಔರಾದ್ನಲ್ಲಿ 80.4 ಮಿ.ಮೀ, ಚಿಂತಾಕಿಯಲ್ಲಿ 80.3 ಮಿ.ಮೀ, ಸಂತಪುರಲ್ಲಿ 120 ಮಿ.ಮೀ ಮಳೆ ಅಬ್ಬರಿಸಿದೆ.
ಬೀದರ್ ತಾಲ್ಲೂಕಿನ ಚಿಟ್ಟಾ 65 ಮಿ.ಮೀ, ಮಾಳೆಗಾಂವ, ಅಲಿಯಾಬಾದ್ನಲ್ಲಿ 64.5 ಮಿ.ಮೀ, ಭಾಲ್ಕಿ ತಾಲ್ಲೂಕಿನ ಕುರುಬಖೇಳಗಿಯಲ್ಲಿ 66.5 ಮಿ.ಮೀ, ಮೋರಂಬಿ, ಬಾಳೂರ, ಚಳಕಾಪುರದಲ್ಲಿ 65 ಮಿ.ಮೀ, ಘೋರಚಿಂಚೋಳಿಯಲ್ಲಿ 64.5 ಮಿ.ಮೀ, ಹುಲಸೂರಲ್ಲಿ 64.5 ಮಿ.ಮೀ ಹಾಗೂ ಕಮಲನಗರದಲ್ಲಿ 58.6 ಮಿ.ಮೀ ಮಳೆ ಸುರಿದಿದೆ. ಹವಾಮಾನ ವಿಜ್ಞಾನ ಇಲಾಖೆ ಭಾನುವಾರವೂ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.
ಬೀದರ್ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಇಂದು (ಜುಲೈ 23) ಅಂಗನವಾಡಿ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.