ಜಮಖಂಡಿ: ಆತಿಥೇಯ ಬಾಗಲಕೋಟೆ ತಂಡದವರು ಎಂಆರ್ಎನ್ (ನಿರಾಣಿ) ಫೌಂಡೇಷನ್ ಆಶ್ರಯದಲ್ಲಿ ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯು ತ್ತಿರುವ ರಾಷ್ಟ್ರಮಟ್ಟದ ಪುರುಷರ ಹಾಗೂ ಮಹಿಳೆಯರ ರಾಷ್ಟ್ರೀಯ ಆಹ್ವಾನಿತ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಸೋಲು ಕಂಡರು.
ಪುರುಷರ ವಿಭಾಗದಲ್ಲಿ ಬೆಂಗಳೂರಿನ ಕೆಎಸ್ಪಿ ತಂಡ 33–12ರಿಂದ ಬಾಗಕಲೋಟೆ ಎದುರು ಜಯ ಪಡೆಯಿತು. ಇತರ ಪಂದ್ಯಗಳಲ್ಲಿ ಮುಂಬೈನ ಮಹೀಂದ್ರ ಮತ್ತು ಮಹೀಂದ್ರ ತಂಡ 24–13ರಲ್ಲಿ ಬೆಳಗಾವಿ ಮೇಲೂ, ಬೆಂಗಳೂರಿನ ಎಎಸ್ಸಿ ತಂಡ 33–7 ಅಂಕಗಳಿಂದ ಧಾರವಾಡದ ಭಾರತ ಕ್ರೀಡಾಪ್ರಾಧಿಕಾರದ ವಿರುದ್ಧವೂ ಗೆಲುವು ಪಡೆದವು.
ಮಹಿಳಾ ವಿಭಾಗದಲ್ಲಿ ಸೇಲಂನ ಎಸ್ಎಂಸಿ ತಂಡ 48–19ರಲ್ಲಿ ಕೊಲ್ಹಾಪುರದ ಆರ್ಎಸ್ಸಿವಿ ತಂಡದ ವಿರುದ್ಧವೂ, ಪಶ್ಚಿಮ ವಲಯ ರೈಲ್ವೆ ತಂಡ 45–11ರಲ್ಲಿ ಭೂಮಿಕಾ ಚಿಮ್ಮಡ ತಂಡದ ಮೇಲೂ, ಬೆಳಗಾವಿಯ ಅಬಾಜಿ ಫೌಂಡೇಷನ್ ತಂಡ 35–22ರಲ್ಲಿ ಜಮಖಂಡಿ ಸ್ಪೋರ್ಟ್ಸ್ ತಂಡದ ವಿರುದ್ಧವೂ ಗೆಲುವು ಸಾಧಿಸಿದವು.