ಜನವಾಡ: ‘ಕಾನೂನು ಅರಿವು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ. ಹೇಳಿದರು.
ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದಲ್ಲಿ ಮಂಗಳವಾರ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಾನೂನು ಅರಿವು ಇಲ್ಲದ ಕಾರಣ ಅನೇಕರು ಸಂಕಷ್ಟ ಎದುರಿಸಿದ ಉದಾಹರಣೆಗಳು ಇವೆ. ಹೀಗಾಗಿ ಕಾನೂನು ತಿಳಿವಳಿಕೆ ಹೊಂದುವುದು ಜರೂರಿಯಾಗಿದೆ’ ಎಂದು ತಿಳಿಸಿದರು.
ಬಗದಲ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಯ್ಯದ್ ಪಟೇಲ್ ಮಾತನಾಡಿ, ‘ಸಣ್ಣಪುಟ್ಟ ವ್ಯಾಜ್ಯಗಳಿಗೆ ನ್ಯಾಯಾಲಯಕ್ಕೆ ಹೋಗುವುದನ್ನು ಬಿಟ್ಟು ತಮ್ಮ ತಮ್ಮಲ್ಲೇ ಪರಿಹಾರ ಕಂಡುಕೊಳ್ಳಬೇಕು. ಇದರಿಂದ ಸಮಯ, ಶ್ರಮದ ಉಳಿತಾಯ ಆಗುತ್ತದೆ’ ಎಂದು ಹೇಳಿದರು.
‘ಕಾನೂನು ಚೌಕಟ್ಟಿನೊಳಗೇ ಎಲ್ಲರೂ ಜೀವನ ಸಾಗಿಸಬೇಕು’ ಎಂದು ತಿಳಿಸಿದರು.
ಕಂದಾಯ ನಿರೀಕ್ಷಕ ಮುಕುಂದರಾವ್ ಅವರು, ವಿಧವಾ ವೇತನ, ಅಂಗವಿಕಲ ವೇತನ, ವೃದ್ಧಾಪ್ಯ ವೇತನ, ಮನಸ್ವಿನಿ, ಪ್ರಕೃತಿ ವಿಕೋಪ ಸಹಾಯಧನ ಯೋಜನೆ, ರಾಷ್ಟ್ರೀಯ ಭದ್ರತಾ ನಿಧಿ ಮೊದಲಾದ ಯೋಜನೆಗಳ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋಫಿಯಾ ಬೀ, ಅಭಿವೃದ್ಧಿ ಅಧಿಕಾರಿ ಸುಜಾತಾ, ವಕೀಲ ಸಂಗೋಳಗಿ ಗಿರೆಪ್ಪ, ಭದ್ರೇಶ್ವರ ಮಠದ ಶಿವಕುಮಾರ ಸ್ವಾಮಿ, ಬೀದರ್ ಎಪಿಎಂಸಿ ಮಾಜಿ ಅಧ್ಯಕ್ಷ ಚನ್ನಮಲ್ಲಪ್ಪ ಹಜ್ಜರಗಿ, ಅನಿಲ ಹಜ್ಜರಗಿ, ರಾಜಕುಮಾರ ಪಾಟೀಲ, ರೇವಣಪ್ಪ ಭದ್ರಣ್ಣವರ, ಗುಂಡಯ್ಯ ಸ್ವಾಮಿ, ಬಭ್ರುವಾಹನ ಇದ್ದರು.