ಬೀದರ್: ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಬಿರುಗಾಳಿ, ಗುಡುಗು ಸಹಿತ ಮಳೆಯಾಗಿದೆ. ಸಿಡಿಲು ಬಡಿದು ಇಬ್ಬರು ರೈತರು ಹಾಗೂ ಒಂದು ಹೋರಿ ಮೃತಪಟ್ಟಿದೆ.
ಹುಮನಾಬಾದ್ ತಾಲ್ಲೂಕಿನ ದುಬಲಗುಂಡಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ದಯಾನಂದ ಸಿದ್ದಪ್ಪ ಶಿರಶೆಟ್ಟಿ (41) ಸಿಡಿಲಿಗೆ ಬಲಿಯಾದರೆ, ಮಾಣಿಕಪ್ಪ ಹಳ್ಳಿಖೇಡಕರ್, ಅನಿಲ ಕೇರೂರ, ಜಗನ್ನಾಥ ಪಸಾರ್ಗಿ ಹಾಗೂ ಬಸವರಾಜ ಹುಡಗೆ ಗಾಯಗೊಂಡಿದ್ದಾರೆ.
ಭಾಲ್ಕಿ ತಾಲ್ಲೂಕಿನ ತಳವಾಡದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತ ಮಾದಪ್ಪ ಸಿದ್ದಪ್ಪ ಬೋರಕೆ(57) ಹಾಗೂ ಹೋರಿ ಸಾವಿಗೀಡಾಗಿದೆ. ಬಸವಕಲ್ಯಾಣ ತಾಲ್ಲೂಕಿನ ಧನಗರವಾಡಿಯಲ್ಲಿ ಸಿಡಿಲಿನಿಂದ ಬೆಂಕಿ ಹೊತ್ತಿಕೊಂಡು ಕೊಟ್ಟಿಗೆ ಸುಟ್ಟಿದೆ.
ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡದಲ್ಲಿ ಆಲಿಕಲ್ಲು ಮಳೆ ಸುರಿದರೆ, ಬಸವಕಲ್ಯಾಣದಲ್ಲಿ ಜಿಟಿಜಿಟಿ ಮಳೆಯಾಗಿದೆ. ಭಾಲ್ಕಿ, ಹುಮನಾಬಾದ್ ಹಾಗೂ ಔರಾದ್ ತಾಲ್ಲೂಕಿನ ಕೆಲವಡೆ ಸಾಧಾರಣ ಮಳೆಯಾಗಿದೆ.