ಬೀದರ್: ‘ಕೋವಿಡ್ ಕಾರಣ ಎರಡು ವರ್ಷ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ನಡೆದಿಲ್ಲ. ಹಾಗಾಂತ ಹೋರಾಟ ನಿಂತಿಲ್ಲ. 2022ರಲ್ಲಿ ಹೈದರಾಬಾದ್ನಲ್ಲಿ ಲಿಂಗಾಯತ ರ್ಯಾಲಿ ನಡೆಸಲಾಗುವುದು’ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ್ ತಿಳಿಸಿದರು.
‘ಕೇಂದ್ರ ಸರ್ಕಾರದ ಗಮನ ಸೆಳೆಯಲು ತೆಲಂಗಾಣದ ಹೈದರಾಬಾದ್ನಲ್ಲಿ ಒಂದು ಲಕ್ಷ ಲಿಂಗಾಯತರನ್ನು ಸೇರಿಸಿ ರ್ಯಾಲಿ ನಡೆಸಲಾಗುವುದು’ ಎಂದು ಇಲ್ಲಿಯ ಬಸವ ಮಂಟಪದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
‘ಲಿಂಗಾಯತ ಹೋರಾಟ ರಾಜಕೀಯಗೊಳ್ಳುತ್ತಿರುವುದು ವಿಷಾದಯನೀಯ. ಲಿಂಗಾಯತ ಸಮುದಾಯದ ಒಳಪಂಗಡಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ನಂತರ ರ್ಯಾಲಿ ನಡೆಸಲಾಗುವುದು’ ಎಂದು ಹೇಳಿದರು.
‘ಬಸವಕಲ್ಯಾಣದಲ್ಲಿ ಆರಂಭಿಸಿದ ಕಲ್ಯಾಣ ಪರ್ವ 20ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಅಕ್ಟೋಬರ್ 18, 19 ಹಾಗೂ 20ರಂದು ಕಲ್ಯಾಣ ಪರ್ವ ನಡೆಯಲಿದೆ. ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಉದ್ಘಾಟಿಸಲಿದ್ದಾರೆ’ ಎಂದು ತಿಳಿಸಿದರು.