ಬಸವಕಲ್ಯಾಣ (ಬೀದರ್ ಜಿಲ್ಲೆ): ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಗೆ ಎನ್ಸಿಪಿಯಿಂದ ಸಲ್ಲಿಸಿದ ನಾಮಪತ್ರ ಹಿಂಪಡೆದು, ಬಿಜೆಪಿ ಬೆಂಬಲಿಸಿದ ಮಾಜಿ ಶಾಸಕ ಎಂ.ಜಿ.ಮುಳೆ ಅವರ ನಿಲುವನ್ನು ಮರಾಠಾ ಸಮಾಜದವರು ಖಂಡಿಸಿದ್ದಾರೆ. ನಗರದ ಶಿವಾಜಿ ಪಾರ್ಕ್ನಲ್ಲಿ ಭಾನುವಾರ ಸಭೆ ನಡೆಸಿದ ಸಮಾಜದವರು ತೀವ್ರ ವಿರೋಧ ವ್ಯಕ್ತಪಡಿಸಿದರು.
‘ಮರಾಠಾ ಸಮಾಜದ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಿದ್ದಾರೆ. ಆದ್ದರಿಂದ ನಾಮಪತ್ರ ಹಿಂಪಡೆದಿರುವುದಾಗಿ ಮುಳೆ ಅವರು ಸುಳ್ಳು ಹೇಳುತ್ತಿದ್ದಾರೆ. ಬೇಡಿಕೆ ಈಡೇರಿಸುವ ಬಗ್ಗೆ ಅವರೊಬ್ಬರ ಕಿವಿಯಲ್ಲಿಯೇ ಮುಖ್ಯಮಂತ್ರಿ ಹೇಗೆ ಹೇಳಿದರು’ ಎಂದು ಕೆಲವರು ಪ್ರಶ್ನಿಸಿದರು.
‘ಸಮಾಜದ ಯಾರೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸ್ವಇಚ್ಛೆಯಿಂದ ಈ ತೀರ್ಮಾನ ತೆಗೆದುಕೊಂಡಿರುವ ಕಾರಣ ಅವರ ಹಿಂದೆ ಸಮಾಜ ಇಲ್ಲ. ಮುಳೆ ಅವರು ಸಮಾಜಕ್ಕೆ ಹಾಗೂ ಎನ್ಸಿಪಿಗೆ ದ್ರೋಹ ಬಗೆದಿದ್ದಾರೆ’ ಎಂದರು.
ಸಕಲ ಮರಾಠಾ ಕ್ರಾಂತಿ ಮೋರ್ಚಾ ಜಿಲ್ಲಾ ಸಂಯೋಜಕ ನಾರಾಯಣ ಗಣೇಶ, ಶಿವಾಜಿರಾವ್ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಆನಂದ ಪಾಟೀಲ, ಹಿರಿಯ ಮುಖಂಡ ಅಂಗದರಾವ್ ಜಗತಾಪ, ಮಹಾದೇವ ಹಸೂರೆ ಇದ್ದರು.