ಲಖನೌ : ವಾರಾಣಸಿಯ ರೈಲ್ವೆ ನಿಲ್ದಾಣ ಬಳಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕುಸಿತಕ್ಕೆ ಸಂಬಂಧಿಸಿ, ಉತ್ತರಪ್ರದೇಶ ಸೇತುವೆ ನಿಗಮದ ಅಧಿಕಾರಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಸಿದ್ದಾರೆ. ಸರ್ಕಾರಿ ಸ್ವಾಮ್ಯದ ಈ ಸಂಸ್ಥೆಯ ಕಾಮಗಾರಿ ಗುಣಮಟ್ಟದ ಬಗ್ಗೆ ಈ ಹಿಂದೆಯೂ ದೂರುಗಳು ಕೇಳಿಬಂದಿದ್ದವು.
ನಿಗಮದ ಮುಖ್ಯ ಯೋಜನಾಧಿಕಾರಿ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರ ನಡೆದ ಘಟನೆಯಲ್ಲಿ 18 ಮಂದಿ ಮೃತಪಟ್ಟಿದ್ದರು.
ಲಂಚದ ಬೇಡಿಕೆ– ಅಮಾನತು: ಮೇಲ್ಸೇತುವೆ ಕುಸಿತದಿಂದ ಮೃತಪಟ್ಟವರ ಶವ ಪಡೆಯಲು ಅವರ ಕುಟುಂಬದವರಿಂದ ಲಂಚಕ್ಕೆ ಬೇಡಿಕೆಯಿಡುತ್ತಿದ್ದ ಆಸ್ಪತ್ರೆ ನೌಕರನೊಬ್ಬನನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ. ಆತನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್ಯು) ಮರಣೋತ್ತರ ಪರೀಕ್ಷಾ ಕೇಂದ್ರದಿಂದ ಶವ ಪಡೆಯಲು ಪ್ರತಿ ಶವದ ಮೇಲೆ ₹ 300 ಹಣಕ್ಕೆ ಬೇಡಿಕೆಯಿಡಲಾಗಿತ್ತು. ಹಣ ನೀಡದವರಿಗೆ ಮೃತದೇಹ ನೀಡಲು ನಿರಾಕರಿಸಲಾಗಿತ್ತು.