ಬೆಂಗಳೂರು: ನಗರದ ಹಲವೆಡೆ ಶುಕ್ರವಾರ ಸಂಜೆ ಬಿರುಗಾಳಿ, ಗುಡುಗು ಹಾಗೂ ಮಿಂಚು ಸಹಿತ ಬಿರುಸಿನ ಮಳೆಯಾಗಿದೆ.
ಸಂಜೆ 4ರ ನಂತರ ಮೋಡ ಕವಿದ ವಾತಾವರಣ ಇತ್ತು. ಕೆಲ ಸಮಯದಲ್ಲೇ ಜೋರಾಗಿ ಬಿರುಗಾಳಿ ಬೀಸಿದೆ. ಬಳಿಕ ಅರ್ಧ ಗಂಟೆ ವರೆಗೂ ಹಲವೆಡೆ ಜೋರು ಮಳೆಯಾಗಿದ್ದು 17 ಮರಗಳು ಬಿದ್ದಿವೆ.
ವಿಧಾನಸೌಧ, ಮೆಜೆಸ್ಟಿಕ್, ಎಂ.ಜಿ.ರಸ್ತೆ, ರಿಚ್ಮಂಡ್ ಟೌನ್, ಶಾಂತಿನಗರ, ಬಸವನಗುಡಿ, ಜಯನಗರ, ಜೆ.ಪಿ.ನಗರ, ಬನಶಂಕರಿ, ಮಲ್ಲೇಶ್ವರ, ಹೆಬ್ಬಾಳ, ಶಿವಾಜಿನಗರ, ಹಲಸೂರು, ಇಂದಿರಾನಗರ, ರಾಜಾಜಿನಗರ, ಬಸವೇಶ್ವರ ನಗರ, ವಿಜಯನಗರ, ಯಶವಂತಪುರ, ಹನುಮಂತನಗರ ಹಾಗೂ ಸುತ್ತಮುತ್ತ ಕೆಲ ಹೊತ್ತು ಜೋರು ಮಳೆಯಾಗಿದೆ.
ಅಲ್ಲಿಯ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿಹರಿಯಿತು. ಅದರಲ್ಲೆ ವಾಹನಗಳು ಸಂಚರಿಸಿದವು. ಶಿವಾನಂದ ವೃತ್ತದ ಬಳಿಯ ಕೆಳ ಸೇತುವೆ ಬಳಿ ನಿಂತಿದ್ದ ನೀರಿನಲ್ಲಿ ಕೆಲ ವಾಹನಗಳು ಸಂಚರಿಸಿದ್ದರಿಂದ ಅವುಗಳು ನೀರಿನ ಮಧ್ಯೆಯೇ ಕೆಟ್ಟು ನಿಂತವು. ಕೆಳಗೆ ಇಳಿದ ಸವಾರರು ತಮ್ಮ ವಾಹನಗಳನ್ನು ತಳ್ಳಿಕೊಂಡು ಮುಂದೆ ಸಾಗಿದರು. ಹೀಗಾಗಿ, ಈ ಮಾರ್ಗದಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು.