ಔರಾದ್ (ಬೀದರ್): ಸತತ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಹೆಚ್ಚಿನ ಹಾನಿಯಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಹೇಳಿದರು.
ಶುಕ್ರವಾರ ತಾಲ್ಲೂಕಿನ ಮಳೆ ಹಾನಿಯಾದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ತಾಲ್ಲೂಕಿನಲ್ಲಿ 127ಕ್ಕೂ ಅಧಿಕ ಮನೆಗಳ ಗೋಡೆ ಕುಸಿದಿವೆ. ಹಲ್ಯಾಳ ಸೇರಿದಂತೆ ಹಲವು ಕೆರೆಗಳು ತುಂಬಿ ಹರಿಯುತ್ತಿವೆ. ಇದರಿಂದ ನೂರಾರು ಎಕರೆ ಬೆಳೆ ಹಾನಿಯಾಗಿದೆ. ನಾನು ಖುದ್ದಾಗಿ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದನೆ. ಮನೆ ಗೋಡೆ ಕುಸಿದ ಸಂತ್ರಸ್ತರಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗುತ್ತಿದೆ.
ಒಟ್ಟಾರೆ ಹಾನಿಯಾದ ಕುರಿತು ಸಮೀಕ್ಷೆ ನಡೆಯುತ್ತಿದೆ. ಈ ಎಲ್ಲ ಮಾಹಿತಿ ಮುಖ್ಯಮಂತ್ರಿಗ ಗಮನಕ್ಕೆ ತಂದು ವಿಶೇಷ ಪರಿಹಾರ ಜತೆ ಅತಿವೃಷ್ಟಿ ತಾಲ್ಲೂಕು ಘೋಷಣೆಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.
ತಹಶಿಲ್ದಾರ್ ಅರುಣಕುಮಾರ ಕುಲಕರ್ಣಿ, ತಾಪಂ ಇಒ ಬೀರೇದ್ರಸಿಂಗ್, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಚಿವರ ಜತೆ ಇದ್ದರು.
ಸಚಿವರು ಮಳೆಯಿಂದ ಶಾಲೆ ಮೇಲ್ಛಾವಣಿ ಕುಸಿದ ಕರಂಜಿ (ಬಿ) ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಶಾಲೆ ಛಾವಣಿ ಕುಸಿದ ಕುರಿತು ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.