ಬೀದರ್: ಕೋವಿಡ್ 19 ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ಸಹಾಯಹಸ್ತ ಚಾಚಿದ್ದಾರೆ.
ಬಸವಕಲ್ಯಾಣ ನಗರ ಹಾಗೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಅಕ್ಕಿ, ಬೇಳೆ, ಸಿಹಿ ಎಣ್ಣೆ, ಉಪ್ಪು, ಖಾರ, ಸಾಬೂನು ಒಳಗೊಂಡ ಆಹಾರ ಪೊಟ್ಟಣ ವಿತರಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
ಬಸವಕಲ್ಯಾಣ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಬುಧವಾರ ಸಾವಿರಾರು ಜನರಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ಆಹಾರ ಪೊಟ್ಟಣ ವಿತರಿಸಿದರು.
‘ಕೋವಿಡ್ 19 ಸೋಂಕು ತಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್ಡೌನ್ ಮಾಡಿದ್ದು, ಇದರಿಂದ ಕಾಯಕ ಮಾಡಿ ಹೊಟ್ಟೆ ತುಂಬಿಕೊಳ್ಳುವ ಕುಟುಂಬಗಳು ತೊಂದರೆಗೆ ಒಳಗಾಗಿವೆ. ಈ ಪ್ರಯುಕ್ತ ಅವರಿಗೆ ನೆರವಾಗಲು ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ’ ಎಂದು ಬಿ. ನಾರಾಯಣರಾವ್ ತಿಳಿಸಿದರು.
‘ಸಾಮಾಜಿಕ ಅಂತರದಿಂದ ಮಾತ್ರ ಕೋವಿಡ್ 19 ಸೋಂಕನ್ನು ತಡೆಯಬಹುದಾಗಿದೆ. ಹೀಗಾಗಿ ಏಪ್ರಿಲ್ 14 ರವರೆಗೆ ಜನ ಮನೆಯಲ್ಲೇ ಇರಬೇಕು’ ಎಂದು ಮನವಿ ಮಾಡಿದರು.