ಬೀದರ್: ಇಲ್ಲಿಯ ಜ್ಞಾನಸುಧಾ ವಿದ್ಯಾಲಯದಲ್ಲಿ ತಾಯಂದಿರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾಲಯದಲ್ಲಿ ವಾಸ್ಯಂಗ ಮಾಡುತ್ತಿರುವ ನರ್ಸರಿಯಿಂದ 10ನೇ ತರಗತಿವರೆಗಿನ ಮಕ್ಕಳ ತಾಯಂದಿರು ಕುರ್ಚಿ ಆಟ, ಬಾಲ್ ಎಸೆತ ಸೇರಿದಂತೆ ವಿವಿಧ ಆಟಗಳಲ್ಲಿ ಪಾಲ್ಗೊಂಡರು.
ಅತಿ ಹೆಚ್ಚು ಬಳೆ ಧರಿಸಿದ, ಉದ್ದನೆಯ ಮತ್ತು ಸಣ್ಣ ಕೂದಲು ಹೊಂದಿದ ತಾಯಂದಿರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹೈದ್ರಾಬಾದ್ನ ಡೈವರ್ಸಿಟಿ ದ ಪ್ಲೇಸ್ಕೂಲ್ ಸಂಸ್ಥಾಪಕ ನಿರ್ದೇಶಕಿ ಮೆಹೆಕ್ ವಲೆಚಾ ಮಾತನಾಡಿ, ‘ತಾಯಂದಿರು ಮಕ್ಕಳಿಗೆ ಬಾಲ್ಯದಲ್ಲಿಯೇ ಶಿಸ್ತು, ಸಂಯಮ ಕಲಿಸಬೇಕು. ಬೇರೆಯವರನ್ನು ಗೌರವಿಸುವುದನ್ನು ಹೇಳಿಕೊಡಬೇಕು ಎಂದು ತಿಳಿಸಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ. ಮಾತನಾಡಿ, ‘ಮಕ್ಕಳ ಸರ್ವತೋಮುಖ ಬೆಳೆವಣಿಗೆಯಲ್ಲಿ ಶಾಲೆಯ ಪಾತ್ರ ಎಷ್ಟು ಮುಖ್ಯವೋ, ಪಾಲಕರ ಪಾತ್ರವೂ ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.
‘ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಬೇಕು. ಅವರಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ಪಠ್ಯೇತರ ಚಟುವಟಿಕೆಗಳು ಕ್ರಿಯಾಶೀಲತೆ ಬೆಳೆಸಲು ಸಹಕಾರಿಯಾಗಿರುವ ಕಾರಣ ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು’ ಎಂದು ಸಲಹೆ ಮಾಡಿದರು.
ಸಂಸ್ಥೆಯ ನಿರ್ದೇಶಕ ಮುನೇಶ್ವರ ಲಾಖಾ ಅವರು ಮಾತನಾಡಿ, ‘ಪಾಲಕರು ಮಕ್ಕಳಿಗೆ ಮಾನವೀಯ ಮೌಲ್ಯಗಳ ಪರಿಚಯ ಮಾಡಿಕೊಡಬೇಕು’ ಎಂದು ಹೇಳಿದರು.