ಭಾಲ್ಕಿ: ಶಾಂತಿ, ನೆಮ್ಮದಿಗಾಗಿ ಪ್ರತಿಯೊಬ್ಬರೂ ಸಂಗೀತದ ಅಭಿರುಚಿ ಬೆಳೆಸಿಕೊಳ್ಳುವುದು ಅಗತ್ಯ ಎಂದು ಗೋರಚಿಂಚೋಳಿ ಸಿದ್ಧರಾಮೇಶ್ವರ ಮಠದ ಸಿದ್ಧರಾಮೇಶ್ವರ ಪಟ್ಟದ್ದೇವರು ಹೇಳಿದರು.
ಪಟ್ಟಣದಲ್ಲಿ ಪಂಡಿತ ಶಾಂತರಾಮ ಚಿಗ್ರಿ ಅವರ 2ನೇ ಪುಣ್ಯಸ್ಮರಣೆ ನಿಮಿತ್ತ ಈಚೆಗೆ ನಡೆದ ಸಂಗೀತ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಯಮಾತನಾಡಿದರು.
ಇಂದಿನ ಆಧುನಿಕತೆಯ ಭರಾಟೆಯಲ್ಲಿ ಮನುಷ್ಯ ಒತ್ತಡಕ್ಕೆ ಸಿಲುಕಿ ನೆಮ್ಮದಿ ಕಳೆದುಕೊಂಡು ರಕ್ತದೊತ್ತಡ, ಮಧುಮೇಹದಂಥ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾನೆ ಎಂದು ಕಳವಳ ವ್ಯಕ್ತ ಪಡಿಸಿದ ಅವರು, ಸಂಗೀತಕ್ಕೆ ರೋಗ ನಿವಾರಿಸುವ ಶಕ್ತಿ ಇದ್ದು, ಪ್ರತಿಯೊಬ್ಬರೂ ತಮ್ಮಲ್ಲಿನ ಒಂದಿಷ್ಟು ಸಮಯ ಸಂಗೀತದ ಅಭಿರುಚಿ ಬೆಳೆಸಿಕೊಳ್ಳಲು ಮೀಸಲಿಡಬೇಕು ಎಂದು ತಿಳಿಸಿದರು.
ಯುವ ಮುಖಂಡ ಶಿವು ಲೋಖಂಡೆ, ಜೈ ಭಾರತ್ ಮಾತಾ ಸೇವಾ ಸಮಿತಿ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪೂರ ಮಾತನಾಡಿದರು. ಸಂಗೀತ ಕಲಾವಿದ ಶಿವಾಜಿ ಸಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಸಂತೋಷ ಬಿಜಿ ಪಾಟೀಲ, ಹಾವಗಿರಾವ್ ಬಿರಾದಾರ, ಅನಿಲ ದಾಡಗೆ, ಗಣೇಶ ಪಾಟೀಲ, ಕೇಶವರಾವ್ ಸೂರ್ಯವಂಶಿ ಇದ್ದರು.