ಬಸವಕಲ್ಯಾಣ: ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಗ್ರಾಮಗಳನ್ನು ಅಭಿವೃದ್ಧಿಗೊಳಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಂತೋಷ ಚವಾಣ್ ಹೇಳಿದರು.
ತಾಲ್ಲೂಕಿನ ರಾಜೋಳಾ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಆಯೋಜಿಸಿದ್ದ ನರೇಗಾ ‘ದುಡಿಯೋಣ ಬಾ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಯಲ್ಲಿ ವಿವಿಧ ಕಾಮಗಾರಿ ನಡೆಯುತ್ತಿವೆ. ಇದು ಕಾರ್ಮಿಕ ವರ್ಗದವರು ಆರ್ಥಿಕವಾಗಿ ಸಬಲರಾಗಲು ಸಹಾಯಕ ಆಗಿದೆ. ಆದ್ದರಿಂದ ರಾಜೋಳಾದಲ್ಲಿಯೂ ಹೊಸ ಹೊಸ ಯೋಜನೆಗಳಲ್ಲಿ ಕೆಲಸ ಕೈಗೊಳ್ಳಬೇಕು’ ಎಂದರು.
‘ದುಡಿಯೋಣ ಬಾ ಅಭಿಯಾನದಡಿ ರೈತರ ಜಮೀನುಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ತೆರೆದಬಾವಿ, ಸೋಕ್ ಪಿಟ್ ನಿರ್ಮಾಣ ಹಾಗೂ ಸಮಗ್ರ ಕೆರೆ ಅಭಿವೃದ್ಧಿ ಕೈಗೊಳ್ಳಬಹುದು. ಶಾಲೆಗಳ ಆವರಣಗಳಲ್ಲಿ ಆಟದ ಮೈದಾನ ಅಭಿವೃದ್ಧಿಪಡಿಸಬಹುದು’ ಎಂದು ತಿಳಿಸಿದರು.
ಸಂಯೋಜಕ ವೀರಾರೆಡ್ಡಿ ಆರ್.ಎಸ್. ಯೋಜನೆ ಉದ್ದೇಶ ತಿಳಿಸಿದರು.