ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಔರಾದ್ ಹಾಗೂ ಬೀದರ್ ಸಾರಿಗೆ ಘಟಕದ ಇಬ್ಬರು ಸಿಬ್ಬಂದಿ ಲಕ್ಷಾಂತರ ರೂಪಾಯಿ ಕಬಳಿಸಿದರೂ ಸಂಸ್ಥೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ಆದರೆ, ಬಸ್ನಲ್ಲಿ ಪ್ರಯಾಣಿಕರೊಬ್ಬರು ಒಯ್ಯುತ್ತಿದ್ದ ‘ಜೋಡಿ ಹಕ್ಕಿ’ಗೆ (ಲವ್ ಬರ್ಡ್ಸ್) ಟಿಕೆಟ್ ಕೊಡದ್ದಕ್ಕೆ ಬಸ್ ಕಂಡಕ್ಟರ್ ನೌಕರಿಗೇ ಕುತ್ತು ಬಂದಿದೆ.
ಹೈದರಾಬಾದ್–ಔರಾದ್ ಬಸ್ನಲ್ಲಿ ಪ್ರಯಾಣಿಕರೊಬ್ಬರು ಮನೆಯಲ್ಲಿ ಸಾಕಲು ಪಿಂಜರದಲ್ಲಿ ಹೈದರಾಬಾದ್ನಿಂದ ಲವ್ ಬರ್ಡ್ಸ್ ತರುತ್ತಿದ್ದರು. ಬಸ್ನ ಎಲ್ಲ ಪ್ರಯಾಣಿಕರ ಗಮನ ಲವ್ ಬರ್ಡ್ಸ್ ಮೇಲಿತ್ತು. ಬಸ್ನಲ್ಲಿ ಪ್ರಯಾಣಿಸುವ ಪ್ರಾಣಿ, ಪಕ್ಷಿಗೂ ಟಿಕೆಟ್ ಕೊಡಬೇಕು ಎನ್ನುವುದು ಸಾರಿಗೆ ಸಂಸ್ಥೆಯ ನಿಯಮ.
ಜೋಡಿ ಹಕ್ಕಿಗಳಿಗೆ ಅರ್ಧ ಟಿಕೆಟ್ ಪಡೆಯಲು ಲವ್ ಬರ್ಡ್ಸ್ ಮಾಲೀಕನಿಗೆ ಕಂಡಕ್ಟರ್ ಕೋರಿದ್ದಾರೆ. ಆದರೆ, ಮಾಲೀಕ ಟಿಕೆಟ್ ಪಡೆಯಲು ಒಪ್ಪಲಿಲ್ಲ. ಆಗ ಪ್ರಯಾಣಿಕರು, ‘ಹಕ್ಕಿ ತೂಕವೆಷ್ಟು, ಅದು ಕೂರಲು ಎಷ್ಟು ಜಾಗ ಬೇಕು’ ಎಂದೆಲ್ಲ ಹೇಳಿ ಕಂಡಕ್ಟರ್ಗೆ ಸುಮ್ಮನಾಗಿಸಿದರು.
ಪ್ರಯಾಣಿಕರೊಂದಿಗೆ ಹೆಚ್ಚು ವಾಗ್ವಾದ ಮಾಡುವುದು ಸರಿ ಅಲ್ಲವೆಂದು ಭಾವಿಸಿ ಕಂಡಕ್ಟರ್ ಮೌನವಾದರು. ಆದರೆ, ಮಾರ್ಗ ಮಧ್ಯೆ ವಿಚಕ್ಷಕ ದಳದವರು ತಪಾಸಣೆ ನಡೆಸಿದಾಗ ಜೋಡಿ ಹಕ್ಕಿಗಳಿಗೆ ಟಿಕೆಟ್ ಕೊಡದಿರುವುದು ಗಮನಕ್ಕೆ ಬಂತು.
ವಿಚಕ್ಷಕ ದಳದವರು ನೇರವಾಗಿ ಷರಾ ಬರೆದು ಹಿರಿಯ ಅಧಿಕಾರಿಗಳಿಗೆ ಕಳಿಸಿದ್ದಾರೆ. ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಸಂಸ್ಥೆಯ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಕಂಡಕ್ಟರ್ನನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.
‘ಜೋಡಿ ಹಕ್ಕಿಗಳಿಗೆ ತಲಾ ₹ 114ರ ಅರ್ಧ ಟಿಕೆಟ್ ಕೊಡಬೇಕಿತ್ತು. ಪ್ರಯಾಣಿಕರೊಂದಿಗೆ ವಾಗ್ವಾದ ಮಾಡಿ ಕೈಚೆಲ್ಲಿ ಕೂತೆ. ವಿಚಕ್ಷಕ ದಳದವರು ತಮ್ಮ ಕೆಲಸ ಮಾಡಿದ್ದಾರೆ. ನಾನು 24 ವರ್ಷ ಕಂಡಕ್ಟರ್ ಆಗಿ ಕೆಲಸ ಮಾಡಿದ್ದೇನೆ. ದಂಡ ವಿಧಿಸಿದ್ದರೆ ಟಿಕೆಟ್ ದರದ ದುಪ್ಪಟ್ಟು ಹಣ ಪಾವತಿಸಬಹುದಿತ್ತು. ಆದರೆ, ಸಂಸ್ಥೆಯ ಅಧಿಕಾರಿಗಳು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ’ ಎಂದು ಕಂಡಕ್ಟರ್ ಅಶೋಕ ಹಿಲಾಲಪುರ ಬೇಸರ ವ್ಯಕ್ತಪಡಿಸಿದರು.
ಬೀದರ್ ಡಿಪೊದಲ್ಲಿದ್ದ ಕ್ಯಾಷಿಯರ್ ₹ 59 ಲಕ್ಷ ಕಬಳಿಸಿ ಕೇವಲ 8 ದಿನ ಅಮಾನತುಗೊಂಡು ಮತ್ತೆ ಸಂಡೂರ್ ಡಿಪೊದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಔರಾದ್ ಡಿಪೊದ ಕ್ಯಾಷಿಯರ್ ₹ 2 ಲಕ್ಷ ಗೋಲ್ ಮಾಲ್ ಮಾಡಿ ಐಪಿಎಲ್ ಬೆಟ್ಟಿಂಗ್ನಲ್ಲಿ ತೊಡಗಿಸಿ ಹಣ ಕಳೆದುಕೊಂಡಿದ್ದಾರೆ. ಸಂಸ್ಥೆಗೂ ಹಣ ಪಾವತಿಸಿಲ್ಲ. ಬೀದರ್ ಡಿಪೊ 1ರಲ್ಲಿ ಡೀಸೆಲ್ ಕಳ್ಳತನ ಮಾಡುತ್ತಿದ್ದ ಜ್ಯೂನಿಯರ್ ಅಸಿಸ್ಟಂಟ್ ಅವರನ್ನು ಎರಡು ದಿನಗಳ ಹಿಂದೆಯಷ್ಟೇ ಅಮಾನತು ಮಾಡಿರುವುದನ್ನು ಸಂಸ್ಥೆಯ ಮೂಲಗಳು ಖಾತರಿ ಪಡಿಸಿವೆ. ಜೋಡಿ ಹಕ್ಕಿಗಾಗಿ ಕಂಡಕ್ಟರ್ ಅವರನ್ನು ಅಮಾನತುಗೊಳಿಸಿರುವುದು ಸಾರ್ವಜನಿಕರ ವ್ಯಾಪಕ ಟೀಕೆಗೆ ಒಳಗಾಗಿದೆ.
‘ಪ್ರಯಾಣಿಕರು ತಮ್ಮೊಂದಿಗೆ ಗಿಳಿ, ಪಾರಿವಾಳ, ಕೋಳಿ, ನಾಯಿ ಮರಿ ತಂದರೂ ಟಿಕೆಟ್ ಕೊಡಬೇಕು. ಟೆಕೆಟ್ ಪಡೆಯದ ಪ್ರಯಾಣಿಕರಿಗೆ 10 ಪಟ್ಟು ದಂಡ ವಿಧಿಸುವ ಹಾಗೂ ಕಂಡಕ್ಟರ್ನನ್ನು ಅಮಾನತುಗೊಳಿಸುವ ಅಧಿಕಾರ ಸಂಸ್ಥೆಗೆ ಇದೆ’ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಗೌಡಗೇರಿ ತಿಳಿಸಿದರು.
‘ನಿಗಮದ ಹಣ ಯಾರೇ ದುರ್ಬಳಕೆ ಮಾಡಿಕೊಂಡರೂ ಮುಲಾಜಿಲ್ಲದೇ ವಸೂಲಿ ಮಾಡಲಾಗುವುದು ಹಾಗೂ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.