ಬೀದರ್: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೀದರ್ ಜಿಲ್ಲೆ ಈ ಬಾರಿ ಉತ್ತಮ ಸಾಧನೆ ಮಾಡಿದೆ. ಶೇಕಡ 78.97 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದು, ಜಿಲ್ಲೆ ಮತ್ತೆ ‘ಎ’ ಗ್ರೇಡ್ನಲ್ಲಿ ಗುರುತಿಸಿಕೊಂಡಿದೆ.
ಭಾಲ್ಕಿಯ ವಿದ್ಯಾಭಾರತಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಸುಷ್ಮಿತಾ ದಾಮೋದರ್ ಗಾದಗೆ 625ಕ್ಕೆ 625 ಅಂಕಗಳನ್ನು ಪಡೆದು
ರಾಜ್ಯಕ್ಕೆ ಮೊದಲಿಗರಾಗಿದ್ದಾರೆ.
ಬೀದರ್ನ ಡಾ.ತೋಂಟದ ಸಿದ್ಧಲಿಂಗ ಪ್ರೌಢ ಶಾಲೆಯ ಸಾಕ್ಷಿ ಚಂದ್ರಕಾಂತ, ಬಸವಕಲ್ಯಾಣದ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯ ರಾಜ ಯುವರಾಜ್, ಜ್ಞಾನಪ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಅಮನ್ ದತ್ತಾತ್ರೇಯ, ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಸಂಚಾಲಿತ ಪ್ರೌಢಶಾಲೆಯ ವಿದ್ಯಾರ್ಥಿ ಸುಮಿತ್ ಈಶ್ವರ, ಭಾಲ್ಕಿ ಪಟ್ಟಣದ ಶ್ರೀ ಸತ್ಯಸಾಯಿ ಪಬ್ಲಿಕ್ ಶಾಲೆಯ ಪ್ರೇರಣಾ ಗೋರಖನಾಥ್ ಸೇರಿ ಜಿಲ್ಲೆಯ ಒಟ್ಟು 6 ವಿದ್ಯಾರ್ಥಿಗಳು 624 ಅಂಕ, 6 ವಿದ್ಯಾರ್ಥಿಗಳು 623 ಅಂಕ, 18 ವಿದ್ಯಾರ್ಥಿಗಳು 622 ಅಂಕ, 16 ವಿದ್ಯಾರ್ಥಿಗಳು 621 ಅಂಕ ಹಾಗೂ 7 ವಿದ್ಯಾರ್ಥಿಗಳು 620 ಅಂಕ ಪಡೆದಿದ್ದಾರೆ.
‘ಎ+’ ಶ್ರೇಣಿಯಲ್ಲಿ 3,601 ವಿದ್ಯಾರ್ಥಿಗಳು. ‘ಎ’ ಶ್ರೇಣಿಯಲ್ಲಿ 5,751, ‘ಬಿ+’ ಶ್ರೇಣಿಯಲ್ಲಿ 5,653, ‘ಬಿ’ ಶ್ರೇಣಿಯಲ್ಲಿ 4,535,
‘ಸಿ+’ ಶ್ರೇಣಿಯಲ್ಲಿ 2,716 ವಿದ್ಯಾರ್ಥಿಗಳು ಹಾಗೂ ‘ಸಿ’ ಶ್ರೇಣಿಯಲ್ಲಿ 818 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಎರಡು ವರ್ಷ ಕೋವಿಡ್ ಶಿಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿತ್ತು. ಒಟ್ಟು 29,216 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ಒಟ್ಟು 23,074 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪಾಸಾದವರಲ್ಲಿ 11,494 ಬಾಲಕರು ಹಾಗೂ 11,580 ಬಾಲಕಿಯರು ಇದ್ದಾರೆ. ಶೇಕಡ 72.93 ಬಾಲಕರು ಹಾಗೂ 86.05 ಬಾಲಕಿಯರು ಪಾಸಾಗಿದ್ದಾರೆ ಎಂದು ಡಿಡಿಪಿಐ ಗಣಪತಿ ಬಾರಾಟಕ್ಕೆ ತಿಳಿಸಿದರು.
427 ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125, ಹದಿನಾರು ವಿದ್ಯಾರ್ಥಿಗಳು ದ್ವಿತೀಯ ಭಾಷೆ ಇಂಗ್ಲಿಷ್ನಲ್ಲಿ 125, ಮರಾಠಿ ಹಾಗೂ ಹಿಂದಿಯಲ್ಲಿ ತಲಾ ಒಬ್ಬರು 125, ಹನ್ನೆರಡು ವಿದ್ಯಾರ್ಥಿಗಳು ಉರ್ದು ಭಾಷೆಯಲ್ಲಿ 125 ಒಟ್ಟು 211 ವಿದ್ಯಾರ್ಥಿಗಳು ದ್ವಿತೀಯ ಭಾಷೆ ಕನ್ನಡದಲ್ಲಿ 100ಕ್ಕೆ ನೂರು ಅಂಕ ಪಡೆದಿದ್ದಾರೆ. ಗಣಿತದಲ್ಲಿ 669, ವಿಜ್ಞಾನದಲ್ಲಿ 170, ಸಮಾಜ ವಿಜ್ಞಾನದಲ್ಲಿ 1,535 ವಿದ್ಯಾರ್ಥಿಗಳು ನೂರಕ್ಕೆ 100 ಅಂಕ ಗಳಿಸಿದ್ದಾರೆ.
ಬೀದರ್ ಜಿಲ್ಲೆ 2018ರಲ್ಲಿ ಶೇಕಡ 60.71 ರಷ್ಟು, 2019ರಲ್ಲಿ ಶೇಕಡ 75.59 ರಷ್ಟು, 2020ರಲ್ಲಿ ಶೇಕಡ 71.73 ರಷ್ಟು, 2021ರಲ್ಲಿ ಶೇಕಡ 100 ರಷ್ಟು ಹಾಗೂ ಪ್ರಸಕ್ತ ವರ್ಷ ಶೇಕಡ 78.97 ರಷ್ಟು ಫಲಿತಾಂಶ ಪಡೆದಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಈ ವರ್ಷವೂ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಜಿಲ್ಲೆಗಳ ಪಟ್ಟಿ ಸಿದ್ಧಪಡಿಸಿಲ್ಲ. ವಿದ್ಯಾರ್ಥಿಗಳ ಫಲಿತಾಂಶವನ್ನು ಆರು ಶ್ರೇಣಿಗಳಲ್ಲಿ ವರ್ಗೀಕರಿಸಲಾಗಿದೆ. 2020ರಲ್ಲಿ ಬೀದರ್ ಜಿಲ್ಲೆ ‘ಬಿ’ ಗ್ರೇಡ್ ಪಡೆದಿತ್ತು. ಕಳೆದ ವರ್ಷ ‘ಎ’ ಗ್ರೇಡ್ ಪಡೆದಿತ್ತು. ಈ ವರ್ಷವೂ ‘ಎ’ ಗ್ರೇಡ್ ಉಳಿಸಿಕೊಂಡಿದೆ.
ಕೋವಿಡ್ ತೊಲಗಿದ ನಂತರ ಶಾಲೆಗಳು ಆರಂಭವಾದರೂ ವಿದ್ಯಾರ್ಥಿಗಳಿಗೆ ಓದಲು ಹೆಚ್ಚು ಸಮಯ ದೊರಕಿರಲಿಲ್ಲ. ಆದರೂ ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಚೆನ್ನಾಗಿ ಓದಿದ ಫಲವಾಗಿ ಉತ್ತಮ ಫಲಿತಾಂಶ ಬಂದಿದೆ. ಇದರಿಂದ ಜಿಲ್ಲೆಯ ಗೌರವ ಹೆಚ್ಚಿದೆ ಎಂದು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾಧಿಕಾರಿ ಡಾ.ಟಿ.ಆರ್. ದೊಡ್ಡೆ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.